ಪಿರಿಯಾಪಟ್ಟಣ: ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಗೋ.ಮಧುಸೂದನ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಮುಖಂಡರು ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು ಮಾತನಾಡಿ, ಗೋ.ಮಧುಸೂದನ್ ಖಾಸಗಿ ಸುದ್ದಿವಾಹಿನಿಯ ಚರ್ಚೆಯಲ್ಲಿ ಮಾತನಾಡುತ್ತಾ, ಅಂಬೇಡ್ಕರ್ ಬರೆದಿರುವ ಸಂವಿಧಾನ ನಾವು ಒಪ್ಪುವುದಿಲ್ಲ, ಅದೊಂದು ಸುಳ್ಳಿನ ಕಂತೆ ಎಂದು ಹೇಳಿ ರಾಷ್ಟ್ರೀಯ ಏಕತೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರು ತಹಶೀಲ್ದಾರ್ ಜೆ.ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಮುಖಂಡರಾದ ಈರಾಜ್ ಬಹುಜನ್, ಹಿಟ್ನಳ್ಳಿ ದೇವರಾಜು, ಲಿಂಗಾಪುರ ಬಸಪ್ಪ, ಪಿ.ಪಿ.ಪುಟ್ಟಯ್ಯ, ಪ್ರಕಾಶ್, ಜಗದೀಶ್, ಶಿವರಾಜ, ಚಲುವರಾಜು, ರಾಜಯ್ಯ, ನಾಗೇಶ್, ದೇವೇಂದ್ರ, ಬೆಳತ್ತೂರು ವಿಜಯಕುಮಾರ್, ಮುಸ್ಲಿಂ ಮುಖಂಡರಾದ ಇಲ್ಯಾಸ್, ಮಹಮದ್ ಷಫಿ, ಮುಜಾಯಿದ್, ಇನಾಯತ್, ಸಲೀಂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.