ADVERTISEMENT

ನೋಟು ರದ್ದು; 24ರಂದು ಸಂಸದರಿಗೆ ಬಹಿರಂಗ ಆಹ್ವಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:52 IST
Last Updated 8 ಫೆಬ್ರುವರಿ 2017, 7:52 IST

ಮೈಸೂರು: ನೋಟು ರದ್ದತಿಯ ಸಾಧಕ– ಬಾಧಕಗಳ ಕುರಿತು ಚರ್ಚಿಸಲು ಮತ್ತು ಕಪ್ಪು ಹಣವನ್ನು ಹೊರತೆಗೆಯುವ ಸಂಬಂಧ ಕೇಂದ್ರ ಸರ್ಕಾರ ಗಂಭೀರವಾಗಿದೆಯೇ ಎನ್ನುವ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಸಂಸದ ಪ್ರತಾಪಸಿಂಹ ಅವರಿಗೆ ಫೆ. 24ರಂದು ಬೆಳಿಗ್ಗೆ 10.30ಕ್ಕೆ ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಬಹಿರಂಗ ಆಹ್ವಾನ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ₹ 500, 1 ಸಾವಿರ ನೋಟು ರದ್ದತಿ ನಿರ್ಧಾರವು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಇದು ಕಪ್ಪುಹಣದ ವಿರುದ್ಧದ ಸಮರ ಎಂದು ಪ್ರಧಾನಿ ಘೋಷಿಸಿದ್ದರು. ಇದಾಗಿ 3 ತಿಂಗಳು ಕಳೆದಿದೆ. ಕೇಂದ್ರ ಸರ್ಕಾರ ಬಜೆಟ್‌ ಮಂಡಿಸಿದೆ. ಇದುವರೆಗೂ ನೋಟು ರದ್ದತಿ ಕ್ರಮದಿಂದ ಪತ್ತೆಯಾದ ಕಪ್ಪುಹಣದ ಕುರಿತು ಕೇಂದ್ರ ಸರ್ಕಾರ ಯಾವ ಮಾಹಿತಿಯನ್ನೂ ನೀಡಿಲ್ಲ.

ಇದಕ್ಕಾಗಿ ಸಮಾನ ಮನಸ್ಕ ಸಂಘಟನೆ ಗಳಾದ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಜನಶಕ್ತಿ, ಎಐಡಿವೈಒ ಸೇರಿದಂತೆ ಇತರ ಸಂಘಟನೆಗಳು ಕಾರ್ಯಕ್ರಮವನ್ನು ಆಯೋಜಿಸಿವೆ’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು.

ಮುಖಾಮುಖಿ ಚರ್ಚೆಗೆ ಮೊದಲು ಆರ್ಥಿಕತಜ್ಞ ಪ್ರೊ.ಅರುಣಕುಮಾರ್ ಆಶಯ ಭಾಷಣ ಮಾಡಲಿದ್ದಾರೆ. ದೆಹಲಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲ ಯದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ‘ಭಾರತದಲ್ಲಿ ಕಪ್ಪು ಆರ್ಥಿಕತೆ’ ಕುರಿತು ಗ್ರಂಥ ರಚಿಸಿದ್ದಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿ ಗಳಾದ ಅಭಿರುಚಿ ಗಣೇಶ್, ಆಲಗೂಡು ಶಿವಕುಮಾರ್‌, ಎಚ್‌.ವಿ.ವಾಸು, ಎಚ್‌.ಎನ್‌.ರಂಜಿತ್, ಸೀಮಾ, ಕರುಣಾಕರನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.