ಹುಣಸೂರು: ಹುಣಸೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನ.25ರಿಂದ ಒಂದು ವಾರಗಳ ಕಾಲ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಕುಟ್ಟಿ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಎರಡನೇ ಆವೃತ್ತಿಯಾಗಿದ್ದು, ಪ್ರಥಮ ಆವೃತ್ತಿಯಲ್ಲಿ ವ್ಯಕ್ತವಾದ ಉತ್ತಮ ಬೆಂಬಲದಿಂದ ಈ ಬಾರಿ ಲೀಗ್ ಪಂದ್ಯಾವಳಿ ಹಮ್ಮಿಕೊಂಡಿದ್ದೇವೆ ಎಂದರು.
ಪ್ರಸಕ್ತ ಸಾಲಿನಲ್ಲಿ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲು 10 ತಂಡಗಳು ಪ್ರವೇಶ ಪಡೆದಿದ್ದು, ಸ್ಥಳೀಯ ಆಟಗಾರರೊಂದಿಗೆ ರಾಜ್ಯ ಮಟ್ಟದಲ್ಲಿ ಆಡಿರುವ ಮೂವರು ಕ್ರಿಕೆಟ್ ಆಟಗಾರರು ಪ್ರತಿ ತಂಡದಲ್ಲಿ ಪ್ರತಿನಿಧಿಸಲಿದ್ದಾರೆ ಎಂದರು.
ಸ್ನೇಹಜೀವಿ ಕಪ್: ಲೀಗ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಸ್ನೇಹಜೀವಿ ಕಪ್ ಹಾಗೂ ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ದ್ವಿತಿಯ ಸ್ಥಾನಕ್ಕೆ ₹50ಸಾವಿರ ಹಾಗೂ ತೃತಿಯ ಸ್ಥಾನಕ್ಕೆ ₹25ಸಾವಿರ ನೀಡಲಾಗುವುದು.
ವಿಶೇಷ ತಂಡ: ಲೀಗ್ ಪಂದ್ಯಾವಳಿಯಲ್ಲಿ ಪ್ರಥಮ ಬಾರಿಗೆ ಕ್ಷೇತ್ರದ ಶಾಸಕ ಮಂಜುನಾಥ್ ನೇತೃತ್ವದಲ್ಲಿ ಸ್ನೇಹಜೀವಿ ತಂಡ, ಆಫೀಸರ್ಸ್ ತಂಡ, ಪೊಲೀಸ್ ತಂಡ ಮತ್ತು ವಕೀಲರ ತಂಡ ರಚಿಸಿ ಸೌಹಾರ್ದತೆಗೆ ಈ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದರು.
ಲೀಗ್ ತಂಡ: ಎ.ಎಂ.ಆರ್.ಎಸ್. ಸೂಪರ್ ಕಿಂಗ್, ಎಂ.ಎಲ್.ಆರ್.ಫೈಟರ್ಸ್, ಪವರ್ ಸ್ಟ್ರೈಕರ್ಸ್, ಪಿ.ಎಂ.ಸ್ಟ್ರೈಕರ್ಸ್, ಸೋನಾಲಿಕ ಸಿಕಿಂದರ್, ಕಾವೇರಿ ಎಕ್ಸ್ಪ್ರೆಸ್, ಲಯನ್ ಹಂಟರ್ಸ್, ಹುಣಸೂರು ಟೈಗರ್ಸ್, ಎಸ್.ಎಸ್.ವಾರಿಯರ್ಸ್, ಕೊಪ್ಲು ಕಿಕ್ ವಾರಿಯರ್ಸ್ ತಂಡಗಳು ಭಾಗವಹಿಸುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆ ದಿನದಂದು ಸಂಜೆ ವಿವಿಧ ಕಲಾ ತಂಡಗಳಿಂದ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಧು ಬಿಳಿಕೆರೆ, ರಾಜೇಶ್, ಯೋಗೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.