ನಂಜನಗೂಡು: ತಾಲ್ಲೂಕಿನಲ್ಲಿ ಭಾನುವಾರವೂ ಮಳೆ ಮುಂದುವರಿದ್ದು, ಹೆಡತಲೆ ಗ್ರಾಮದಲ್ಲಿ ಮತ್ತೆರಡು ಮನೆಗಳು ಕುಸಿದಿವೆ. ಗ್ರಾಮದ ನೀಲಮ್ಮ ಹಾಗೂ ಪುಟ್ಟರಂಗಮ್ಮ ಎಂಬುವವರ ಮನೆಗಳು ಕುಸಿದಿವೆ. ನೀರು ನುಗ್ಗಿ ಜಲಾವೃತಗೊಂಡಿದ್ದ 60 ಮನೆಗಳ ನಿವಾಸಿಗಳು ಮನೆಯಿಂದ ನೀರು ಹೊರಹಾಕುತ್ತಿದ್ದ ದೃಶ್ಯ ಭಾನುವಾರ ಕಂಡುಬಂದಿತು.
ಈ ಮಧ್ಯೆ, ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಚೆಕ್ ಡ್ಯಾಂ ಒಡೆದು ಗ್ರಾಮಕ್ಕೆ ನೀರು ನುಗ್ಗಿ ಕುಸಿದ ಮನೆಗಳ ಸಂತ್ರಸ್ತರಿಗೆ ಜಿಲ್ಲಾ ಪಂಚಾಯಿತಿಯಿಂದ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂಸದ ಆರ್.ಧ್ರುವನಾರಾಯಣ ಹಾಗೂ ಶಾಸಕ ಕಳಲೆ ಎನ್.ಕೇಶವಮೂರ್ತಿ ಅವರು ಸಂತ್ರಸ್ತರಿಗೆ ತಕ್ಷಣ ತಲಾ ₹ 5 ಸಾವಿರ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಇನ್ನೂ ಪರಿಹಾರ ಕೈಸೇರಿಲ್ಲ ಎಂದು ಆರೋಪಿಸಿದರು.
‘ಪ್ರಜಾವಾಣಿ’ ಜತೆ ಮಾತನಾಡಿದ ಶಾಸಕ ಎನ್.ಕೇಶವಮೂರ್ತಿ, ‘ಶನಿವಾರ ಮತ್ತು ಭಾನುವಾರ ಬ್ಯಾಂಕುಗಳಿಗೆ ರಜೆಯಿದ್ದ ಕಾರಣ ಪರಿಹಾರ ವಿತರಿಸಲು ಸಾಧ್ಯವಾಗಿಲ್ಲ. ಸೋಮವಾರ ವಿತರಿಸಲಾ ಗುವುದು. ಸಂತ್ರಸ್ತರಿಗೆ ಆಶ್ರಯ ಯೋಜನೆಯಡಿ ಶೀಘ್ರವಾಗಿ ಮನೆ ನಿರ್ಮಿಸಿಕೊಡುವಂತೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಸೂಚನೆ ನೀಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.