ಪಿರಿಯಾಪಟ್ಟಣ: ‘ಎರಡೂ ರಾಷ್ಟ್ರೀಯ ಪಕ್ಷಗಳು ಜಾತಿ, ಧರ್ಮ ಒಡೆಯುವ ಮೂಲಕ ಕೀಳು ಮಟ್ಟದ ರಾಜಕಾರಣದಲ್ಲಿ ತೊಡಗಿವೆ’ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಸೋಮವಾರ ಆರೋಪಿಸಿದರು.
ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಜೆಡಿಎಸ್ ಮತ್ತು ಬಿಎಸ್ಪಿ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ಯತೀತ ತತ್ವ, ಸಿದ್ಧಾಂತ ಉಳಿಯಬೇಕಿದ್ದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಅಹಿಂದ ಮುಖವಾಡ ಧರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಮುಸಲ್ಮಾನ ಯುವಕರ ಆಗಾಗ್ಗೆ ಪ್ರಕರಣ ದಾಖಲಿಸುವ ಮೂಲಕ ತನ್ನ ನಿಜ ಬಣ್ಣ ಪ್ರದರ್ಶಿಸಿದೆ ಎಂದು ದೂರಿದರು.
‘ನಾನು ಕೂಡಾ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಜಮೀರ್ ಅಹಮ್ಮದ್ ವದಂತಿಯನ್ನು ಹಬ್ಬಿಸುವ ಮೂಲಕ ಪಕ್ಷಕ್ಕೆ ಹಾನಿ ಮಾಡಲು ಯತ್ನಿಸುತ್ತಿದ್ದಾರೆ. ಆದರೆ, ನನ್ನ ಹುಟ್ಟು ಮತ್ತು ಸಾವು ಜೆಡಿಎಸ್ನಲ್ಲೇ’ ಎಂದು ತಿಳಿಸಿದರು.
‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜೊತೆಗೆ ಕೈಜೋಡಿಸಿ ಸರ್ಕಾರ ರಚಿಸಿದಾಗ ಜಮೀರ್ ಅಹಮ್ಮದ್ ಮುಂದಾಳತ್ವ ವಹಿಸಿದ್ದರು. ಆಗ ಬಿಜೆಪಿ ಕೋಮುವಾದಿ ಎಂದು ತಿಳಿದಿರಲಿಲ್ಲವೆ?‘ ಎಂದು ಪ್ರಶ್ನಿಸಿದರು.
ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಅವರು, ‘ಶಾಸಕ ಕೆ.ವೆಂಕಟೇಶ್ ಮುಸ್ಲಿಂ ಜನಾಂಗದ ಅಭಿವೃದ್ಧಿ ಕಡೆಗಣಿಸಿದ್ದಾರೆ. ಅವರಿಗೆ ತಕ್ಕ ಪಾಠವನ್ನು ಮುಸಲ್ಮಾನರು ಮುಸ್ಲಿಂ ಜನಾಂಗವರಿಗೆ ಈಗ ಒದಗಿ ಬಂದಿದೆ’ ಎಂದು ತಿಳಿಸಿದರು.
ತಾಲ್ಲೂಕಿನ ಅಭಿವೃದ್ಧಿ ಪಡಿಸಿದ್ದೇನೆ ಎಂದು ಹೇಳುವ ಶಾಸಕರು ಹಣ ಬೆಂಬಲವಿಲ್ಲದೆ ಚುನಾವಣೆ ಎದುರಿಸುವ ಧೈರ್ಯ ತೋರಿಸಲಿ ಎಂದು ಸವಾಲು ಹಾಕಿದರು.
ಮುಖಂಡರಾದ ರೋಷನ್ ಅಬ್ಬಾಸ್, ಶಫಿವುಲ್ಲಾ, ಅತ್ತಹರ್ ಮತೀನ್, ಶಕೀಲ್ ಅಹಮ್ಮದ್ ಮಾತನಾಡಿದರು.
ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನಾ, ಜಿ.ಪಂ. ಸದಸ್ಯರಾದ ಕೆ.ಎಸ್.ಮಂಜುನಾಥ್, ವಿ.ರಾಜೇಂದ್ರ, ಕೆ.ಸಿ.ಜಯಕುಮಾರ್, ತಾ.ಪಂ.ಸದಸ್ಯ ಎಸ್.ರಾಮು, ಮಲ್ಲಿಕಾರ್ಜುನ, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಪುರಸಭೆ ಸದಸ್ಯ ಅಮ್ಜದ್ ಷರೀಫ್, ಮುಖಂಡರಾದ ಇಮ್ರಾನ್, ಮಹೆದಿ, ಸಾದಿಕ್, ಮುಷೀರ್, ಮಹಮ್ಮದ್ ಗೌಸ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.