ರಾಯಚೂರು: ಖಾಸಗಿ ಆಸ್ಪತ್ರೆಯಲ್ಲಿ ನೇರ ಒಂದೇ ಬಾಗಿಲೊಳಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ಜನರು, ರಾಯಚೂರು ವೈದ್ಯ ವಿಜ್ಞಾನ ಸಂಸ್ಥೆ (ರಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಬಹುಮಹಡಿ ಕಟ್ಟಡದಲ್ಲಿ ವಿವಿಧೆಡೆ ಸುತ್ತಾಡಿ ಸುಸ್ತಾಗಿದ್ದ ದೃಶ್ಯ ಶುಕ್ರವಾರ ಕಂಡಿತು.
ವಿಶಾಲವಾಗಿರುವ ರಿಮ್ಸ್ ಆವರಣದಲ್ಲಿ ಕಾಲೇಜು ಕಟ್ಟಡ, ಆಡಳಿತ ಕಟ್ಟಡ ಹಾಗೂ ಆಸ್ಪತ್ರೆ ಕಟ್ಟಡಗಳಲ್ಲಿ ಯಾವುದು ಏನೆಂದು ಅರ್ಥವಾಗದೆ ಗ್ರಾಮೀಣ ಜನರು ಪ್ರತಿ ಹೆಜ್ಜೆಗೂ ಗೊಂದಲಕ್ಕೀಡಾಗಿದ್ದರು. ವಿಚಾರಿಸಿಕೊಂಡು ಆಸ್ಪತ್ರೆ ತಲುಪಿದರೂ ಗೊಂದಲ ನಿವಾರಣೆ ಆಗಲಿಲ್ಲ. ನೋಂದಣಿ ವಿಭಾಗ ಹುಡುಕುವುದು, ಅಲ್ಲಿಂದ ಚಿಕಿತ್ಸಾ ವಿಭಾಗ ಹುಡುಕುವ ಶ್ರಮದಿಂದ ಅನೇಕರು ನೆಲಕ್ಕೆ ಕುಸಿದು ವಿಶ್ರಾಂತಿ ಪಡೆಯುತ್ತಿದ್ದರು.
‘ಸರ್ಕಾರಿ ಆಸ್ಪತ್ರೆಗೆ ಫಸ್ಟ್ ಬಂದ್ರೇವ್ರೀ. ಎಲ್ಲಿ ಏನೈತಿ ಅಂಥ ಗೋತ್ತಾವಲ್ದು’ ಎಂದು ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದ ಯರಗೇರಿಯ ತಾಯಪ್ಪ ಅವರು ಮಾರ್ಗಮಧ್ಯೆ ಜನರನ್ನು ವಿಚಾರಿಸಿಕೊಂಡು ಹೋಗುವಾಗ ಹೇಳಿದ ಮಾತಿದು.
ಫಲಕಗಳಿದ್ದರೂ ಓದಲು ಸಾಧ್ಯವಾಗದೆ ಚಿಕಿತ್ಸೆ ಪಡೆಯುವುದಕ್ಕೆ ರಿಮ್ಸ್ನಲ್ಲಿ ಅನೇಕರು ಗೊಂದಲಕ್ಕೀಡಾಗಿದ್ದರು. ಕಳೆದ ಎರಡು ದಿನದಂದು ಇದ್ದಷ್ಟು ರಿಮ್ಸ್ನಲ್ಲಿ ಶುಕ್ರವಾರ ಜನನಿಬೀಡ ಇರಲಿಲ್ಲ. ಆದರೆ ಖಾಸಗಿ ಆಸ್ಪತ್ರೆ ಬಂದ್ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಿಮ್ಸ್ನತ್ತ ಬರುತ್ತಿರುವುದು ಕಂಡು ಬಂತು. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ನಿವೃತ್ತ ಎಎಸ್ಐ ಸಾವು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಎಎಸ್ಐ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟರು. ಕೊಪ್ಪಳ ಜಿಲ್ಲೆಯ ಈಶ್ವರಪ್ಪ (62) ಮೃತರು. ಕೊಪ್ಪಳದಲ್ಲಿ ಬೈಕ್ನಿಂದ ಬಿದ್ದಿದ್ದ ಅವರನ್ನು ಧಾರವಾಡಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಗುರುವಾರ ರಿಮ್ಸ್ಗೆ ತರಲಾಗಿತ್ತು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.