ADVERTISEMENT

ಬಿರುಸಾಗಿ ಸುರಿದ ಮಳೆ: ಎಪಿಎಂಸಿ ಪ್ರಾಂಗಣದಲ್ಲಿ ನೀರು ಪಾಲಾದ ಈರುಳ್ಳಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:58 IST
Last Updated 6 ಸೆಪ್ಟೆಂಬರ್ 2017, 5:58 IST
ರಾಯಚೂರಿನಲ್ಲಿ ಮಂಗಳವಾರ ಸುರಿದ ಮಳೆಗೆ ಎಪಿಎಂಸಿ ಪ್ರಾಂಗಣದಲ್ಲಿ ರೈತರು ಗುಡ್ಡೆಹಾಕಿದ್ದ ಈರುಳ್ಳಿ ನೀರುಪಾಲಾಯಿತು
ರಾಯಚೂರಿನಲ್ಲಿ ಮಂಗಳವಾರ ಸುರಿದ ಮಳೆಗೆ ಎಪಿಎಂಸಿ ಪ್ರಾಂಗಣದಲ್ಲಿ ರೈತರು ಗುಡ್ಡೆಹಾಕಿದ್ದ ಈರುಳ್ಳಿ ನೀರುಪಾಲಾಯಿತು   

ರಾಯಚೂರು: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಅನಿರೀಕ್ಷಿತವಾಗಿ ಸುರಿದ ಬಿರುಸಿನ ಮಳೆಯಿಂದಾಗಿ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಕ್ಕೆ ರೈತರು ರಾಶಿ ಹಾಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ನೀರು ಪಾಲಾಯಿತು.

ವಿಶಾಲವಾದ ಪ್ರಾಂಗಣಕ್ಕೆ ತಗಡಿನ ಹೊದಿಕೆಗಳಿದ್ದರೂ ಸುತ್ತಮುತ್ತ ಮಳೆನೀರು ಭರ್ತಿಯಾಗಿ ಒಳಗೆ ನುಗ್ಗಿತು. ಮಳೆ ಅರ್ಧಗಂಟೆ ಸುರಿದರೂ  ಜೋರಾಗಿತ್ತು. ಬೆಳಿಗ್ಗೆ ಬಿರುಬಿಸಿಲಿನ ವಾತಾವರಣವಿತ್ತು. ಹೀಗಾಗಿ ರೈತರನ್ನು ಈರುಳ್ಳಿಯನ್ನು ಪ್ರಾಂಗಣದಲ್ಲಿ ಒಣಹಾಕಿದ್ದರು.

ಪ್ರತಿಭಟನೆ: ಅಪಾರ ನಷ್ಟದಿಂದ ಆಕ್ರೋಶಗೊಂಡ ರೈತರು ಎಪಿಎಂಸಿ ಗೇಟ್‌ ಬಂದ್‌ ಮಾಡಿ ಪ್ರತಿಭಟನೆಗೆ ಮುಂದಾದರು. ರೈತ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಧಾವಿಸಿದ್ದರಿಂದ ಪ್ರತಿಭಟನೆ ಕೆಲ ಹೊತ್ತು ಮುಂದುವರಿಯಿತು. ಆನಂತರ ಎಪಿಎಂಸಿ ಕಾರ್ಯದರ್ಶಿ ರಘುಪತಿ ಭಟ್‌ ಅವರು ಬಂದು ರೈತರ ಅಹವಾಲು ಆಲಿಸಿದರು. ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದರಿಂದ ರೈತರು ಪ್ರತಿಭಟನೆ ಕೈಬಿಟ್ಟರು. ರಾಯಚೂರು ಜಿಲ್ಲೆ ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಬಂದಿದ್ದ ರೈತರು ಈರುಳ್ಳಿಯನ್ನು ಮಾರಾಟ ಮಾಡುವುದಕ್ಕೆ ಕಾದು ಕುಳಿತಿದ್ದರು.

ADVERTISEMENT

ಶಾಲೆಯಿಂದ ಹೋದ ಮಕ್ಕಳು:
ಮಳೆಯಿಂದಾಗಿ ತಾಲ್ಲೂಕು ಜೇಗರಕಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಕೋಣೆಗಳಲ್ಲಿ ಸೋರಿಕೆ ಆಯಿತು. ಇದರಿಂದಾಗಿ ವಿದ್ಯಾರ್ಥಿಗಳನ್ನು ಮಂಗಳವಾರ ಮನೆಗೆ ಕಳುಹಿಸಲಾಯಿತು.

‘ಈ ಶಾಲೆಯಲ್ಲಿ 372 ವಿದ್ಯಾರ್ಥಿಗಳು ಇದ್ದಾರೆ. ಸಣ್ಣ ಮಳೆಯಾದರೂ ಕೋಣೆಗಳಲ್ಲಿ ನೀರು ಸೋರುತ್ತದೆ. ದುಃಸ್ಥಿತಿ ಕುರಿತು ಮುಖ್ಯ ಶಿಕ್ಷಕರು ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.