ಲಿಂಗಸುಗೂರು: ‘ವಿಶ್ವದ ಎಲ್ಲ ಧರ್ಮಗಳು ಶಾಂತಿ, ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆ ಸಾರುತ್ತವೆ. ಜೈನ ಧರ್ಮವು ಕೂಡ ಅಂತಹ ವಿಚಾರಗಳ ಜೊತೆಗೆ ಅಹಿಂಸಾ ತತ್ವದ ಪರಿಪಾಲನೆಗೆ ಹೆಚ್ಚಿನ ಆದ್ಯತೆ ನೀಡಿದೆ. ನಾವೆಲ್ಲರೂ ಅದರಲ್ಲಿನ ಅಂಶಗಳನ್ನು ಪರಿಪಾಲಿಸಬೇಕು’ ಎಂದು ಜೈನಧರ್ಮದ ಮುನಿಶ್ರೀ ಸುಪ್ರಭ ಸಾಗರಜೀ ಹೇಳಿದರು.
ಫೆಬ್ರುವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಮಂಗಲ ಯಾತ್ರೆ ಹಿನ್ನೆಲೆಯಲ್ಲಿ ಸೊಮವಾರ ಆಶೀರ್ವಚನ ನೀಡಿದ ಅವರು, ‘ಸುತ್ತಮುತ್ತಲ ಜೀವರಾಶಿಗಳನ್ನು ರಕ್ಷಿಸುತ್ತ ಸುಂದರ ಬದುಕು ರೂಪಿಸಿಕೊಳ್ಳಿ. ಇತರೆ ಜೀವಿಗಳನ್ನು ಬದುಕಲು ಬೀಡಿ. ದುಶ್ಚಟಗಳಿಂದ ದೂರವಿದ್ದು ಸ್ವಸ್ತ ಸಮಾಜ ನಿರ್ಮಿಸಿ’ ಎಂದರು.
ಮಹಾರಾಷ್ಟ್ರದಿಂದ ಬಂದ ಮಂಗಲ ಯಾತ್ರೆಯನ್ನು ಅದ್ಧೂರಿಯಿಂದ ಸ್ವಾಗತಿಸಲಾಯಿತು. ಜೈನ ಮುನಿಗಳಾದ ಸುಪ್ರಭ ಸಾಗರಜೀ, ಪ್ರಣತ ಸಾಗರಜೀ, ಅನುಪಮ ಸಾಗರಜೀ ಅವರ ಪಾದಕ್ಕೆ ಭಕ್ತರು ನೀರು ಹಾಕಿ ಭಕ್ತಿ ಸಮರ್ಪಿಸಿದರು.
ಸ್ಥಳೀಯರಾದ ಗಣೇಶ ಶೇಠ, ಮಿಟ್ಟುಶೇಠ, ರೇಖಚಂದ ಮೆಹ್ತಾ, ಮಾಣಿಕ್ಶೆಟ್ಟಿ, ಮಹಾಂತೇಶ ಗೌಡರ, ಪಾರ್ಶ್ವನಾಥ ಕೊಲಾರ, ಭರತ್ ಕೊಲಾರ , ಸಂಜಯ, ಸದ್ಯೋಜಾತಪ್ಪ, ಚಂದ್ರಶೇಖರಯ್ಯ ನಂದಿಕೋಲಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.