ADVERTISEMENT

ಸಂಬಳ ಕೇಳಿದ್ದಕ್ಕೆ ಕೊಠಡಿಯಲ್ಲಿ ಕೂಡಿ ಹಾಕಿದ ಪ್ರಾಂಶುಪಾಲ!

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 6:04 IST
Last Updated 22 ನವೆಂಬರ್ 2017, 6:04 IST
ದೇವದುರ್ಗ ಪಟ್ಟಣದ ಹೊರವಲಯದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಅತಿಥಿ ಉಪನ್ಯಾಸಕರನ್ನು ಕೋಣೆಯಲ್ಲಿ ಕೂಡಿಹಾಕಿರುವುದು
ದೇವದುರ್ಗ ಪಟ್ಟಣದ ಹೊರವಲಯದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಅತಿಥಿ ಉಪನ್ಯಾಸಕರನ್ನು ಕೋಣೆಯಲ್ಲಿ ಕೂಡಿಹಾಕಿರುವುದು   

ದೇವದುರ್ಗ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೇಮಕಗೊಂಡ ಅತಿಥಿ ಉಪನ್ಯಾಸಕರನ್ನು ಸೋಮವಾರ ಅದೇ ಕಾಲೇಜಿನ ಪ್ರಾಂಶುಪಾಲ ಡಿ.ವಾಸುದೇವ ಅವರು ಕೋಣೆಯಲ್ಲಿ ಕೂಡಿ ಹಾಕಿ ಬೀಗ ಹಾಕಿದ ಘಟನೆ ಜರುಗಿದೆ.

ಕಾಲೇಜಿನಲ್ಲಿ ಗೌರವಧನದ ಆಧಾರದ ಮೇಲೆ 20 ಉಪನ್ಯಾಸಕರು ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇಲ್ಲಿಯವರೆಗೆ ವೇತನ ಪಾವತಿಸದೇ ಇರುವುದರಿಂದ ಸಂಬಳ ನೀಡುವಂತೆ ಪ್ರಾಂಶುಪಾಲರನ್ನು ಮನವಿ ಮಾಡಲು ಹೋದಾಗ ಕೋಣೆಯಲ್ಲಿ ಕೂಡಿ ಹಾಕಿ ಬೀಗ ಹಾಕಿದರು ಎಂದು ಉಪನ್ಯಾಸಕರು ದೂರಿದ್ದಾರೆ.
ಉಪನ್ಯಾಸಕರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಬೀಗ ಹಾಕಿ, ತಾಸು ಗಟ್ಟಲೆ ಭಯದ ವಾತಾವರಣ ಸೃಷ್ಟಿಸಿದ್ದರು. ನಂತರ ಪೊಲೀಸರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿದೆ.

ನವೆಂಬರ್‌ 23ರಂದು ಪರೀಕ್ಷೆಗಳು ಆರಂಭವಾಗಲಿದ್ದು, ಗೌರವಧನ ನೀಡುವವರೆಗೆ ಪ್ರತಿಭಟನೆ ನಡೆಸುವುದಾಗಿ ಅತಿಥಿ ಉಪನ್ಯಾಸಕರು ಪಟ್ಟು ಹಿಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ ನಂತರ ಪ್ರತಿಭಟನೆ ನಿರ್ಧಾರ ಕೈಬಿಟ್ಟರು.

ADVERTISEMENT

ಪದೇ ಪದೇ ಇಂತಹ ಪ್ರಕರಣಗಳು ಕಾಲೇಜು ಆವರಣದಲ್ಲಿ ನಡೆಯುವುದರಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಪ್ರಾಂಶುಪಾಲರು ಸರಿಯಾಗಿ ಕಾಲೇಜಿಗೆ ಬರದೇ ಇರುವುದರಿಂದ ಕಾಲೇಜಿನಲ್ಲಿ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

‘ಕಳೆದ ಎರಡು ವರ್ಷಗಳಿಂದ ವೇತನವಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಕುರಿತು ಅನೇಕ ಬಾರಿ ಪ್ರಾಂಶುಪಾಲರ ಗಮನಕ್ಕೆ ತಂದರೂ ಇಲ್ಲಿವರೆಗೆ ಗೌರವಧನ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ’ ಎಂದು ಅತಿಥಿ ಉಪನ್ಯಾಸಕ ಹೊನ್ನಪ್ಪ ಅಳಲು ತೋಡಿಕೊಂಡರು.

* * 

ಪ್ರಾಂಶುಪಾಲರ ಕೋಣೆಯಲ್ಲಿ ಕೂಡಿ ಹಾಕಿ, ಏಕಾಏಕಿ ಬೀಗಹಾಕಿದರು. ಪೊಲೀಸರು ಬಂದ ನಂತರ ಬೀಗ ತೆಗೆಯಲಾಯಿತು. ಪ್ರಾಂಶುಪಾಲರ ವಿರುದ್ಧ ದೂರು ನೀಡಲು ಮುಂದಾಗಿದ್ದೇವೆ.
ಹೊನ್ನಪ್ಪ, ಅತಿಥಿ ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.