ADVERTISEMENT

28ರಂದು ಕೋಲಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 16 ಮೇ 2017, 9:01 IST
Last Updated 16 ಮೇ 2017, 9:01 IST

ಬೀದರ್‌: ‘ಕಲಬುರ್ಗಿ ವಿಭಾಗ ಮಟ್ಟದ ಟೋಕರೆ ಕೋಲಿ (ಕಬ್ಬಲಿಗ) ಸಮುದಾಯದ ಜನಜಾಗೃತಿ ಸಮಾವೇಶ ಮೇ 28ರಂದು ಬೆಳಿಗ್ಗೆ 11.15 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಮಾವೇಶದಲ್ಲಿ ಒಂದು ಲಕ್ಷ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲಾಗುವುದು’ ಎಂದು ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ ತಿಳಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿರುವ ಟೋಕರೆ ಕೋಲಿ ಸಮುದಾಯ ಅಭಿವೃದ್ಧಿ ಹೊಂದಿಲ್ಲ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಸಮುದಾಯದಲ್ಲಿ ಜಾಗೃತಿ ಮೂಡಿಸುವುದೇ ಸಮಾವೇಶದ ಉದ್ದೇಶವಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಟೋಕರೆ, ಕೋಳಿ, ಕೋಲಿ, ಕಬ್ಬಲಿಗ, ತಳವಾರ್, ಭೋವಿ, ಮಗುವೀರಾ, ಹರಿಕಾಂತ, ಅಂಬಿಗರ, ಬೆಸ್ತ್ ಕೋಳಿ, ಸುಣಗಾರ ಸೇರಿದಂತೆ 39 ಪರ್ಯಾಯ ಪದಗಳಿಂದ ಕರೆಯಲ್ಪಡುವ ಟೋಕರಿ ಕೋಲಿ ಸಮುದಾಯವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಿ ಮೀಸಲಾತಿ ಸೌಲಭ್ಯ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ಸಮುದಾಯದವರಿಗೆ ಎಸ್‌ಟಿ ಪ್ರಮಾಣ ಪತ್ರ ಸಿಗುತ್ತಿಲ್ಲ’ ಎಂದು ದೂರಿದರು.

ADVERTISEMENT

‘ಸಮಾವೇಶ ಪ್ರಯುಕ್ತ ಮೇ 17ರಿಂದ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಸವಕಲ್ಯಾಣದಲ್ಲಿ ಇರುವ ನಿಜಶರಣ ಅಂಬಿಗರ ಚೌಡಯ್ಯ ಅವರ ಗವಿಯಿಂದ ಆರಂಭವಾಗುವ ಜ್ಯೋತಿಯಾತ್ರೆ ಹುಮನಾಬಾದ್‌, ಭಾಲ್ಕಿ, ಔರಾದ್‌, ಬೀದರ್‌ ತಾಲ್ಲೂಕಿನಲ್ಲಿ ಸಂಚಾರ ಮಾಡಲಿದೆ’ ಎಂದು ಹೇಳಿದರು.

‘ಎರಡನೇ ಹಂತದ ಜ್ಯೋತಿಯಾತ್ರೆ ಮೇ 21ರಂದು ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಆಶ್ರಮದಿಂದ ಪ್ರಾರಂಭವಾಗಲಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರ್ಗಿ ಹಾಗೂ ಬೀದರ್‌ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಸಮಾವೇಶದ ಸ್ಥಳಕ್ಕೆ ಬರಲಿದೆ’ ಎಂದರು.

‘ಸಮಾವೇಶದಲ್ಲಿ ಮಹರ್ಷಿ ವಾಲ್ಮೀಕಿ, ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಾತಾ ಮಾಣಿಕೇಶ್ವರಿ ಅಮ್ಮನವರ ಜಯಂತ್ಯುತ್ಸವವನ್ನು ಆಚರಿಸಲಾಗುವುದು. ಕೇಂದ್ರ ಹಾಗೂ ರಾಜ್ಯದ ಸಚಿವರು, ಗಣ್ಯರು ಹಾಗೂ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಗುರೂಜಿ, ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಜಮಾದಾರ, ಪ್ರಮುಖರಾದ ಶಿವರಾಜ ಔಂಟಿ, ಮಾರುತಿ ಮಾಸ್ಟರ್, ಗೋವಿಂದ ಜಾಲಿ, ಕಪಿಲ್‌ ಕೋಳಿ, ರಾಜು ಜಮಾದಾರ, ಅಪ್ಪಾರಾವ್‌ ಬ್ಯಾಲಹಳ್ಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.