ADVERTISEMENT

ನಾಳೆ ಉದ್ಗೇರಮ್ಮ ಕರಗೋತ್ಸವ

18ನೇ ಬಾರಿ ಕರಗಧಾರಣೆ ಮಾಡುವ ಜಗದೀಶ್‌ lಹಗಲಿನಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:31 IST
Last Updated 17 ಜುಲೈ 2017, 5:31 IST

ರಾಮನಗರ: ನಗರದ ಹುಣಸನಹಳ್ಳಿ ರಸ್ತೆಯ ಸಿಡ್ಲಕಲ್‌ ಗ್ರಾಮದ ಶ್ರೀ ಉದ್ಗೇರಮ್ಮ ಕರಗ ಹಾಗೂ ಅಗ್ನಿಕೊಂಡ ಮಹೋತ್ಸವ ಇದೇ 18ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ಪುರಾತನ ಕಾಲದಿಂದ  ಉದ್ಗೇರಮ್ಮ ದೇವಾಲಯವಿದೆ. 18 ವರ್ಷಗಳಿಂದ ಕರಗ ಮತ್ತು ಅಗ್ನಿಕೊಂಡ ಮಹೋತ್ಸವ ಮಾಡಿಕೊಂಡು ಬರಲಾಗುತ್ತಿದೆ. ಜಗದೀಶ್‌ ಅವರು 18ನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.

ಬೆಳಿಗ್ಗೆ 9 ಗಂಟಗೆ ದೇವಾಲಯದಿಂದ ಹೊರಡುವ ಕರಗವು ಹುಣಸನಹಳ್ಳಿ ಕಾಲೋನಿ, ಹುಣಸನ ಹಳ್ಳಿ, ಕೂನಗಲ್ಲು, ಕೃಷ್ಣಾಪುರದೊಡ್ಡಿ, ಅಚ್ಚಲುದೊಡ್ಡಿಯ ಮೂಲಕ ಬಂದು ಸಂಜೆ 4 ಗಂಟೆಯ ವೇಳೆಗೆ ಅಗ್ನಿಕೊಂಡ ಪ್ರವೇಶಿಸಲಿದೆ.

ADVERTISEMENT

‘ಈ ಭಾಗದಲ್ಲಿ ವ್ಯವಸಾಯ ಮಾಡುವ ಮೊದಲು ನಮ್ಮ ಮನೆತನದ ಹಿರಿಯರು ಉದ್ಗೇರಮ್ಮನಿಗೆ ಪೂಜೆ ಸಲ್ಲಿಸಿ ಪ್ರಾರಂಭಿಸುತ್ತಿದ್ದರು. ಬೆಂಗಳೂರು, ರಾಮನಗರದ ಟ್ರೂಪ್‌ ಲೆನ್‌, ಬಾಲಗೇರಿ ಸೇರಿದಂತೆ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮುಖಂಡ ಅರುಣ್‌ಕುಮಾರ್ ತಿಳಿಸಿದರು.

‘ಮೊದಲು ಸಣ್ಣ ಪ್ರಮಾಣದಲ್ಲಿ ಪೂಜೆ, ಪುನಸ್ಕಾರಗಳು ನಡೆ ಯುತ್ತಿದ್ದವು. ಈ ದೇವತೆಯ ಭಕ್ತಾದಿಗಳು ಈಗ ಹೆಚ್ಚಾಗುತ್ತಿದ್ದಾರೆ. ಇಲ್ಲಿನ ರೈತ ಸಮು ದಾಯ ನಿರಂತರವಾಗಿ ಉದ್ಗೇರ ಮ್ಮನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ’ ಎಂದು ವಿಜಯ್‌ಕುಮಾರ್‌ ತಿಳಿಸಿದರು.

‘ನಮ್ಮ ತಾತನ ಕಾಲದಿಂದಲೂ ಉದ್ಗೇರಮ್ಮನನ್ನು ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ಈ ದೇವತೆಯ ಕರಗವು ಹಗಲು ಹೊತ್ತಿನಲ್ಲಿ ನಡೆಯುತ್ತದೆ. ಉದ್ಗೇರಮ್ಮನನ್ನು ಪೂಜಿಸಿ ಕೊಂಡು ಕೃಷಿ ಕೆಲಸವನ್ನು ಮಾಡಿದರೆ ನಷ್ಟವಾಗುವುದಿಲ್ಲ ಎಂಬುದು ನಂಬಿಕೆ ಯಾಗಿದೆ’ ಎಂದು ಹಿರಿಯರಾದ ಶಾರದಮ್ಮ ತಿಳಿಸಿದರು.

**

ಹನ್ನೊಂದನೆ ಕರಗ
ರಾಮನಗರದಲ್ಲಿ ಇದೇ ಮೊದಲ ಬಾರಿಗೆ 11 ಕರಗ ಉತ್ಸವಗಳು ನಡೆಯುತ್ತಿರುವುದು ವಿಶೇಷತೆಯನ್ನು ಪಡೆದುಕೊಂಡಿದೆ.

ಇದೇ 4ರಂದು ಬಂಡಿಮಹಾಂಕಾಳಿ ಕರಗ, ಇದೇ 11ರಂದು ನವಮಾತೃಕೆಯರಾದ ಚಾಮುಂಡೇಶ್ವರಿ, ಐಜೂರು ಆದಿಶಕ್ತಿ ಕರಗ, ಬಿಸಿಲು ಮಾರಮ್ಮ, ಮಗ್ಗದ ಕೇರಿ ಮಾರಮ್ಮ, ಭಂಡಾರಮ್ಮ ದೇವಿ, ಚೌಡೇಶ್ವರಿ, ಮುತ್ತುಮಾರಮ್ಮ, ಶೆಟ್ಟಿಹಳ್ಳಿ ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ ಉತ್ಸವ ನಡೆದಿತ್ತು. ಈಗ ಉದ್ಗೇರಮ್ಮ ಕರಗ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.