ರಾಮನಗರ: ನಗರದ ಮೂಲಕ ಹಾದುಹೋಗುವ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯು ಸಂಪೂರ್ಣ ಹಾಳಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.
ಕಾರ್ಪೊರೇಷನ್ ಬ್ಯಾಂಕಿನ ಬಳಿ ದೊಡ್ಡ ಗುಂಡಿಯೊಂದು ನಿರ್ಮಾಣವಾಗಿದೆ. ಮುಂದುವರಿದರೆ ಧ್ವಜಸ್ತಂಭದ ಆಸುಪಾಸು ಇನ್ನೂ ನಾಲ್ಕಾರು ಗುಂಡಿಗಳು ಕಾಣಸಿಗುತ್ತವೆ. ಇದರಿಂದ ಜನರು ರಸ್ತೆಯಲ್ಲಿ ನಡೆದಾಡುವುದೂ ಕಷ್ಟವಾಗಿದೆ.
‘ವರ್ಷಗಳಿಂದಲೂ ಈ ಸಮಸ್ಯೆ ಇದೆ. ಗುಂಡಿಯನ್ನು ಮುಚ್ಚಿ ಎಂದು ಹೆದ್ದಾರಿ ಪ್ರಾಧಿಕಾರ, ನಗರಸಭೆಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರಾದ ಶಂಕರ್ ದೂರಿದರು.
‘ಜನರ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಇಲ್ಲಿನ ಜನರೇ ಈ ಗುಂಡಿಗಳಿಗೆ ಮಣ್ಣು ತಂದು ಹಾಕಿ ಮುಚ್ಚುವ ಪ್ರಯತ್ನ ಮಾಡಿದ್ದರು. ಆದರೆ ಈಚೆಗೆ ಉತ್ತಮವಾಗಿ ಮಳೆಯಾದ್ದರಿಂದ ಮತ್ತೆ ಗುಂಡಿ ಬಿದ್ದಿದೆ. ಈ ರಸ್ತೆಯ ಮೂಲಕವೇ ಬ್ಯಾಂಕುಗಳಿಗೆ, ಶಾಲಾ, ಕಾಲೇಜುಗಳಿಗೆ, ವಾಣಿಜ್ಯ ಮಳಿಗೆಗಳಿಗೆ ಹೋಗಬೇಕಾಗಿದೆ’ ಎಂದು ತಿಳಿಸಿದರು.
‘ಹೆದ್ದಾರಿ ರಸ್ತೆಯಲ್ಲಿ ಸಂಚಾರ ಹೆಚ್ಚಾಗಿರುವುದರಿಂದು ಜನರು ಈ ಸರ್ವೀಸ್ ರಸ್ತೆಯನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಗುಂಡಿಗಳಿಗೆ ಹೆದರಿ ಆತಂಕದಿಂದಲೇ ಸಂಚರಿಸುವಂತಾಗಿದೆ’ ಎನ್ನುತ್ತಾರೆ ಧನಂಜಯ ಎಂಬುವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.