ADVERTISEMENT

ವಿಜಯಪುರದಲ್ಲಿ ಶೀಘ್ರ ‘ಜನರಿಕ್ ಔಷಧಿ ಮಳಿಗೆ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:52 IST
Last Updated 8 ಫೆಬ್ರುವರಿ 2017, 8:52 IST

ವಿಜಯಪುರ:  ಸಮುದಾಯದ ಉತ್ತಮ ಸಹಕಾರದಿಂದ ಎಲ್ಲ ವರ್ಗದ ಜನರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯಾಧಿಕಾರಿ ಡಾ.ರಾಜೇಶ್ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ  ಕೇಂದ್ರದಲ್ಲಿ ದಾನಿ ಅಶ್ವಥ್ಥಪ್ಪ ಅವರ ಸಹಕಾರದಿಂದ ನಾಗರಿಕರಿಗಾಗಿ ನಿರ್ಮಾಣ ಮಾಡಿರುವ ಅಲ್ಯೂಮಿನಿಯಂ ಕೊಠಡಿಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ವಿಜಯಪುರ ಸಮುದಾಯ ಕೇಂದ್ರವು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತೆ ಕಾಪಾಡುವುದರಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಸೇವೆ ಒದಗಿಸಲು ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವರ್ಗದ ಜನರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಜಾರಿಗೆ ತಂದಿರುವ ‘ಜನರಿಕ್ ಔಷಧಿ ಮಳಿಗೆ’ ಶೀಘ್ರವೇ ವಿಜಯಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರಂಭಗೊಳ್ಳಲಿದೆ ಎಂದರು.

ಸಮಾಜ ಸೇವಕ ಅಶ್ವಥಪ್ಪ ಮಾತನಾಡಿ, ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದರು.

ಮನವಿ: ಜಿಲ್ಲೆಯಲ್ಲಿ ಈಗಾಗಲೇ  ದಡಾರ, ರುಬಿಲ್ಲಾ ರೋಗಗಳ ವಿರುದ್ಧ ಲಸಿಕೆ ಹಾಕುತ್ತಿದ್ದು ಎಲ್ಲರೂ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಮಂಜುಳಾ ಮನವಿ ಮಾಡಿಕೊಂಡರು.

ಪಟ್ಟಣದ 28 ಅಂಗನವಾಡಿ ಕೇಂದ್ರಗಳು, 33 ಶಾಲೆಗಳನ್ನೊಳ ಗೊಂಡಂತೆ ಒಟ್ಟಾರೆ 11,500 ಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಗುರಿ ಹೊಂದಲಾಗಿದೆ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಶ್ಮಿ, ಡಾ.ಉದಯ್, ಪ್ರಸನ್ನ, ಮುನಿರೆಡ್ಡಿ, ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.