ಕನಕಪುರ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯು ನಗರದ ಸೇಂಟ್ ಥಾಮಸ್ ಕಾಲೇಜಿನಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ರಾಮನಗರ ಜಿಲ್ಲೆಯ ಜಿಲ್ಲಾ ಸಂಘ ಹಾಗೂ ನಾಲ್ಕು ತಾಲ್ಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಸಮಸ್ಯೆ ಮತ್ತು ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಿದರು.
ಕನಕಪುರ ತಾಲ್ಲೂಕು ಸಂಘದ ಅಧ್ಯಕ್ಷ ಚಂದ್ರಶೇಖರ್ ಶಿಕ್ಷಕರ ವೇತನವು ವಿಳಂಬವಾಗುತ್ತಿದೆ, 5ನೇ ತಾರೀಖಿನೊಳಗೆ ಮಾಡಬೇಕು ಹಾಗೂ ಸಂಬಳವಾದ ಮಾಹಿತಿಯು ಎಸ್.ಎಂ.ಎಸ್. ಮೂಲಕ ತಿಳಿಸುವ ಕ್ರಮವಾಗಬೇಕು ಎಂದರು. ಕಾಲಬಡ್ತಿಯು ವಿಳಂಬವಾಗುತ್ತಿದ್ದು ಅದರ ಕಡೆ ಇಲಾಖೆಯು ಗಮನ ಹರಿಸಬೇಕೆಂದು ಮನವಿ ಮಾಡಿದರು.
ರಾಮನಗರ ಸಂಘದ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ವೈದ್ಯಕೀಯ ಸೇವಾ ವೆಚ್ಚವು ಮರುಪಾವತಿ ಯಾಗಬೇಕು. ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರ ಸೇವಾ ಪುಸ್ತಕವು ತ್ವರಿತವಾಗಿ ಆಗದೆ ಬಾಕಿ ಉಳಿಸುವುದರಿಂದ ಸಮಸ್ಯೆ ಆಗುತ್ತಿದೆ ಅದನ್ನು ಆಯಾ ತಿಂಗಳೇ ಮಾಡಬೇಕು ಎಂದರು. ಜ್ಯೋತಿ ಸಂಜೀವಿನಿಯ ವೈದ್ಯಕೀಯ ಸೇವೆ ಪಡೆದವರಿಗೆ ನೇರವಾಗಿ ಇಲಾಖೆಗೆ ತರಬೇಕೆಂಬ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆಂಪೇಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಸಂಘವು ಸಂಘದ ಧ್ಯೇಯೋದ್ದೇಶಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ, ಶಿಕ್ಷಕರ ಸಮಸ್ಯೆಗಳು ಮತ್ತು ಕುಂದು ಕೊರತೆಗಳ ಬಗ್ಗೆ ಸಭೆಯ ಗಮನಕ್ಕೆ ಆಯಾ ತಾಲ್ಲೂಕು ಸಂಘದ ಅಧ್ಯಕ್ಷರು ತಂದಿದ್ದಾರೆ, ಇಲಾಖೆಯ ಉಪ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಂಡಿರುವುದರಿಮದ ಅವರೊಂದಿಗೆ ಚರ್ಚಿಸಿ ಪರಿಹರಿಸಿ ಕೊಡುವುದಾಗಿ ಹೇಳಿದರು.
ಕನಕಪುರ ಕ್ಷೇತ್ರ ಶಿಕ್ಷಣಾಧಿಕಾರಿ ಯತಿಕುಮಾರ್, ಬಿ.ಆರ್.ಸಿ. ಶ್ರೀನಿವಾಸ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷ ಎಲ್.ತಿಪ್ಪೇಸ್ವಾಮಿ, ಮಾಗಡಿ ತಾಲ್ಲೂಕು ಅಧ್ಯಕ್ಷ ರೇಣಿಕಯ್ಯ, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಮಲ್ಲೇಶಯ್ಯ, ಜಿಲ್ಲಾ ಸಂಘದ ಪದಾಧಿಕಾರಿಗಳು, ನಾಲ್ಕು ತಾಲ್ಲೂಕು ಸಂಘದ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.