ADVERTISEMENT

ಹೂಬಳ್ಳಿಗೆ ಕೊಡಲಿ ಪೆಟ್ಟು; ತಂತಿಬೇಲಿ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 5:13 IST
Last Updated 25 ಮೇ 2018, 5:13 IST
ಬಿಡದಿಯ ಬಿಜಿಎಸ್ ವೃತ್ತ ಸಮೀಪ ಹೆದ್ದಾರಿ ವಿಭಜಕದಲ್ಲಿನ ಹೂವಿನ ಗಿಡಗಳನ್ನು ಕತ್ತರಿಸುತ್ತಿರುವುದು
ಬಿಡದಿಯ ಬಿಜಿಎಸ್ ವೃತ್ತ ಸಮೀಪ ಹೆದ್ದಾರಿ ವಿಭಜಕದಲ್ಲಿನ ಹೂವಿನ ಗಿಡಗಳನ್ನು ಕತ್ತರಿಸುತ್ತಿರುವುದು   

ಬಿಡದಿ (ರಾಮನಗರ): ಪಟ್ಟಣದ ಒಳಗೆ ಹಾದುಹೋಗಿರುವ ಬೆಂಗಳೂರು–ಮೈಸೂರು ಹೆದ್ದಾರಿಯನ್ನು ಸಿಂಗರಿಸುವ ಕಾರ್ಯ ನಡೆದಿದ್ದು, ರಸ್ತೆ ಮಧ್ಯೆ ವಿಭಜಕದ ಜಾಗದಲ್ಲಿ ತಂತಿ ಬೇಲಿಯನ್ನು ಅಳವಡಿಸಲಾಗುತ್ತಿದೆ.

ನಾಲ್ಕಾರು ದಿನದಿಂದ ಈ ಕಾರ್ಯವು ಪ್ರಗತಿಯಲ್ಲಿದೆ. ಆದರೆ ಈ ಮೊದಲು ರಸ್ತೆ ವಿಭಜಕ ಜಾಗದಲ್ಲಿ ಬೆಳೆಸಿದ್ದ ಸುಂದರ ಹೂಬಳ್ಳಿಗಳನ್ನು ಕತ್ತರಿಸಿ ಅವುಗಳ ಜಾಗದಲ್ಲಿ ತಂತಿ ಹಾಕುತ್ತಿರುವುದಕ್ಕೆ ಪರಿಸರ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ರಾಮನಗರ, ಬಿಡದಿ ಪಟ್ಟಣಗಳ ಒಳಗೆ ಹೆದ್ದಾರಿಯನ್ನು ವಿಸ್ತರಣೆ ಮಾಡಲಾಗಿದೆ. ರಸ್ತೆ ದೊಡ್ಡದಾಗಿದೆ. ರಸ್ತೆ ವಿಭಜಕವನ್ನೂ ದಾಟಿ ಎದುರಿನ ಹಾದಿಗೆ ವಾಹನಗಳು ನುಗ್ಗಿ ಅಪಘಾತವಾಗಿ ಸಾವು–ನೋವು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಭಜಕ ಮಾರ್ಗವನ್ನು ಬಂದೋಬಸ್ತ್‌ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ
ಹಾಗೆ ಮಾಡಲು ಹೋಗಿ ಪರಿಸರವನ್ನೇ ನಾಶ ಮಾಡುತ್ತಿರುವುದು ಮಾತ್ರ ಸರಿಯಲ್ಲ ಎನ್ನುತ್ತಾರೆ ಬಿಡದಿ ಪಟ್ಟಣದ ನಿವಾಸಿ ರಮೇಶ್‌.

ADVERTISEMENT

ಈಗ ಹಾಕುತ್ತಿರುವ ತಂತಿ ಬೇಲಿಗೆ ಹೋಲಿಸಿದರೆ ಹೂಬಳ್ಳಿಯ ಬೇಲಿಯೇ ಹೆಚ್ಚು ಸೊಗಸಾಗಿತ್ತು. ಸಾಕಷ್ಟು ಎತ್ತರಕ್ಕೆ ಈ ಗಿಡಗಳು ಬೆಳೆದಿದ್ದು, ಅವುಗಳನ್ನು ಸೂಕ್ತವಾಗಿ ಕತ್ತರಿಸಿದ್ದೇ ಆದಲ್ಲಿ ಅದೇ ಬೇಲಿ ಸಾಕಿತ್ತು. ಇದಕ್ಕೆ ಬಳಸುವ ಹಣವನ್ನು ಪಟ್ಟಣದ ರಸ್ತೆಗಳ ಗುಂಡಿ ಮುಚ್ಚಲು ಉಪಯೋಗಿಸಬಹುದಿತ್ತು ಎಂದು ಇಲ್ಲಿನ ಸಾರ್ವಜನಿಕರು ಅಭಿಪ್ರಾಯ ಪಡುತ್ತಾರೆ.

ಅಂದ ಹಾಗೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಬೆಂಗಳೂರು–ಮೈಸೂರು ಹೆದ್ದಾರಿಯನ್ನು ಹಂತಹಂತವಾಗಿ ಅಭಿವೃದ್ಧಿ ಮಾಡುತ್ತಿವೆ. ಬಿಡದಿ ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ಬೀದಿದೀಪಗಳ ಅಳವಡಿಕೆಯೂ ಶೀಘ್ರ ಅನುಷ್ಠಾನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.