ADVERTISEMENT

ತಾಳಗುಪ್ಪಕ್ಕೆ ರೈಲು ಸಂಚಾರ ವಿಸ್ತರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:45 IST
Last Updated 24 ಮಾರ್ಚ್ 2017, 5:45 IST

ಸಾಗರ:  ತಾಲ್ಲೂಕು ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು ಶಿವಮೊಗ್ಗಕ್ಕೆ ಬರುವ ಎಲ್ಲಾ ರೈಲುಗಳ ಸಂಚಾರವನ್ನು ತಾಳಗುಪ್ಪದವರೆಗೆ ವಿಸ್ತರಿಸಬೇಕು, ತಾಲ್ಲೂಕಿನ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಕ್ರಮಬದ್ಧಗೊಳಿಸಬೇಕು ಎಂದು ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಡಾ.ಲೋಕೇಶ್‌ ಅವರಿಗೆ ಮನವಿ ಸಲ್ಲಿಸಿದರು.

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಿಸಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಶಿವಮೊಗ್ಗದವರೆಗೆ ಬರುತ್ತಿರುವ ಎಲ್ಲಾ ರೈಲುಗಳ ಸಂಚಾರವನ್ನು ಜೋಗಕ್ಕೆ ಸಮೀಪವಿರುವ ತಾಳಗುಪ್ಪದವರೆಗೆ ವಿಸ್ತರಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುವ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ
ಗೊಳ್ಳುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಬೀರೂರಿನಿಂದ ತಾಳಗುಪ್ಪದವರೆಗೂ ರೈಲ್ವೆ ಬ್ರಾಡ್‌ಗೇಜ್‌ ಜೋಡಿ ಮಾರ್ಗ ನಿರ್ಮಿಸಬೇಕು. ಸಾಗರ ಹಾಗೂ ಆನಂದಪುರಂ ರೈಲ್ವೆ ನಿಲ್ದಾಣದಲ್ಲಿ ಡಬಲ್‌ ಫ್ಲಾಟ್‌ಫಾರಂ ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಸಾಗರದಿಂದ ಶಿವಮೊಗ್ಗಕ್ಕೆ ₹ 43ರ ದರದಲ್ಲಿ ಎಂಟು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಮಂಜೂರಾತಿ ದೊರಕಿದೆ. ಆದರೆ ಇಲ್ಲಿನ ಘಟಕ ಕೇವಲ 2 ಬಸ್‌ಗಳನ್ನು ಓಡಿಸುತ್ತಿದೆ. ಈ ವಿಷಯದಲ್ಲಿ ಜಿಲ್ಲಾಡಳಿತ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ತಾಲ್ಲೂಕು ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ ಎಸ್‌.ವಿ.ಹಿತಕರ್ ಜೈನ್‌, ಕೆ.ಮಂಜುನಾಥ, ವಿ.ಕೆ. ವಿಜಯಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.