ಭದ್ರಾವತಿ: ಮನುಕುಲದ ಒಳಿತಿಗಾಗಿ ಚಿಂತಿಸಿ ಎಲ್ಲರ ಆತ್ಮೋನ್ನತಿಗೆ ಶ್ರಮಿಸಿದ ಧೀಮಂತ ದಾಸಶ್ರೇಷ್ಠ ಕನಕದಾಸರು ಎಂದು ಶಾಸಕ ಎಂ.ಜೆ. ಅಪ್ಪಾಜಿ ಬಣ್ಣಿಸಿದರು.
ರಾಷ್ಟ್ರೀಯ ಹಬ್ಬಗಳ ಸಮಿತಿ ಸೋಮವಾರ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಮಹಾನ್ ಪುರುಷರ ಜಯಂತಿಗಳು ನಮ್ಮ ಬದುಕಿನಲ್ಲಿ ಅನೇಕ ಬದಲಾವಣೆ ತರುವ ಸಂದರ್ಭ ಸೃಷ್ಟಿಸುತ್ತವೆ ಎಂಬುದನ್ನು ಯಾರು ಮರೆಯಬಾರದು’ ಎಂದರು.
ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಬಿ.ಜಿ. ಧನಂಜಯ, ಕನಕರು ದಾಸ ಸಾಹಿತ್ಯ ಪರಂಪರೆಯ ರೂವಾರಿ ಎಂದು ಬಣ್ಣಿಸಿದರು. ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಸ್ಥಾನ ನೀಡುವಲ್ಲಿ ದಾಸ ಪರಂಪರೆ ತನ್ನದೇ ಕೊಡುಗೆ ನೀಡಿದೆ. ಅದರ ಬೆಳವಣಿಗೆಯಲ್ಲಿ ಕನಕರ ಅಪ್ರತಿಮ ಚಿಂತನೆಗಳು ಹೊರಹೊಮ್ಮಿವೆ. ಅವರು ಕಾಲಜ್ಞಾನಿಯೂ ಹೌದು ಎಂದು ಹೇಳಿದರು.
ಸಾಮಾನ್ಯ ಜನರ ಆಡುಭಾಷೆಯಲ್ಲಿ ಕೀರ್ತನೆ ಬರೆದು ಹರಿದಾಸ ಪರಂಪರೆಗೆ ಸೇರಿದ ಏಕೈಕ ಶೂದ್ರ ಸಂತ ಕನಕರು ಎಂದರು. ಸಭೆಯಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.
ತಹಶೀಲ್ದಾರ್ ಎಂ.ಆರ್. ನಾಗರಾಜ್, ತಾಲ್ಲೂಕು ಪಂಚಾಯ್ತಿ ಅಧಿಕಾರಿ ಸಿದ್ದಲಿಂಗಯ್ಯ, ನಗರಸಭೆ ಅಧ್ಯಕ್ಷೆ ಎಸ್. ಹಾಲಮ್ಮ, ಉಪಾಧ್ಯಕ್ಷೆ ಮಹಾದೇವಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಯಶೋದಮ್ಮ, ಎಂ. ರಾಜು, ನರಸಿಂಹನ್, ಭೈರಪ್ಪಗೌಡ, ನಟರಾಜ್, ಎಪಿಎಂಸಿ ಅಧ್ಯಕ್ಷ ಜಯರಾಂ, ನೌಕರರ ಸಂಘದ ಎನ್. ಕೃಷ್ಣಪ್ಪ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಕನಕದಾಸರ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು. ಶಾಲಾ ಮಕ್ಕಳು ವಿಶೇಷ ವೇಷಗಳನ್ನು ತೊಟ್ಟು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.