ಸಾಗರ: ಇಲ್ಲಿನ ಅರಣ್ಯ ಇಲಾಖೆಯಲ್ಲಿ ಮರ ಕಡಿತಲೆ ಕಡಿತಕ್ಕೆ ಸಹಿ ಹಾಕಲು ಲಂಚ ಸ್ವೀಕರಿಸುತ್ತಿದ್ದಾಗ ವಲಯ ಅರಣ್ಯಾಧಿಕಾರಿ ಸಿ.ಎಂ.ಗಣಪತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಂಬಗಾರು ವಾಸಿ ಸಂದೇಶ್ ಎಂಬುವವರ ಜಾಗದಲ್ಲಿನ ಮರ ಕಡಿತಲೆ ಮಾಡಲು ಸಂಬಂಧಪಟ್ಟ ಕಡತಕ್ಕೆ ಸಹಿ ಹಾಕಲು ಸಿ.ಎಂ.ಗಣಪತಿ ಅವರು ₨ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಒಂದೂವರೆ ವರ್ಷದಿಂದ ಮರ ಕಡಿತಲೆ ಮಾಡಿಸಲು ಅರಣ್ಯ ಇಲಾಖೆ ಕಚೇರಿಗೆ ಅಲೆದು ಸುಸ್ತಾಗಿದ್ದ ಸಂದೇಶ್ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಡಿವೈಎಸ್ಪಿ ನಾಗರಾಜ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಸಂದೇಶ್ ಅವರಿಂದ ಲಂಚ ಪಡೆಯುತ್ತಿದ್ದಾಗ ಸಿ.ಎಂ.ಗಣಪತಿ ಪೊಲೀಸರ ಅತಿಥಿಯಾಗಿದ್ದಾರೆ.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರುದ್ರೇಶ್, ಮುಖ್ಯ ಪೇದೆ ಮೋಹನ್ ನಾಯ್ಕ್, ಸಿಬ್ಬಂದಿ ಪ್ರಸನ್ನ, ಗೀತಾ, ಮಾಲತೇಶ, ಸುರೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.