ADVERTISEMENT

ಪ್ರತಿ ಜಿಲ್ಲೆಯಲ್ಲೂ ಸಹಕಾರಿ ಕಚೇರಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 5:48 IST
Last Updated 8 ಜನವರಿ 2018, 5:48 IST

ಶಿವಮೊಗ್ಗ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹಕಾರಿ ಕಚೇರಿ ತೆರೆಯಲು ಕ್ರಮವಹಿಸಲಾಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಕೃಷ್ಣ ರೆಡ್ಡಿ ಹೇಳಿದರು. ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಾಗೂ ಸಹ್ಯಾದ್ರಿ ಸೌಹಾರ್ದ ಒಕ್ಕೂಟದ ಸಹಯೋಗದಲ್ಲಿ ಸೌಹಾರ್ದ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಜಿಲ್ಲೆಯ ಸಂಪರ್ಕ ಕಚೇರಿ ಹಾಗೂ ದಾವಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಕಾರ್ಯಗಳಿಗೆ ಕಚೇರಿ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಬೆಂಗಳೂರು ಸಂಯುಕ್ತ ಸಹಕಾರಿ ಕಟ್ಟಡ ನಿರ್ಮಿಸಲು ಈಗಾಗಲೇ ನಿವೇಶನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿದೆ. ಜ. 30ರೊಳಗೆ ಎಲ್ಲಾ ಜಿಲ್ಲೆಯಲ್ಲಿಯೂ ಸಹಕಾರಿ ಕಚೇರಿ ತೆರೆಯಲಾಗುವುದು. ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಸಹಕಾರಿಗಳಿಗೆ ಪೂರಕ ಮಾಹಿತಿ ನೀಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಜ.11, 12 ಮತ್ತು 13 ರಂದು ಬೆಂಗಳೂರು, ಮೈಸೂರು ಹಾಗೂ ಗುಲ್ಬರ್ಗದಲ್ಲಿ ನ್ಯಾಯಪೀಠದಲ್ಲಿ ದಾವೆಗಳನ್ನು ಬಗೆಹರಿಸಲಾಗುವುದು. ಎಲ್ಲಾ ಸಹಕಾರಿಗಳು ಇದರ ಸದು ಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ವಾಗ್ಮಿ ಜಿ.ಎಸ್.ನಟೇಶ್ ಅವರು ಮಂಕುತಿಮ್ಮನ ಕಗ್ಗ ಕುರಿತು ಮಾತ ನಾಡಿ, ‘ಮನುಷ್ಯ ನಾನು ಎಂಬ ಅಹಂಕಾರ ಬಿಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಅಲ್ಲದೆ ಪ್ರತಿಯೊಬ್ಬರು ಸ್ವಾರ್ಥಿಗಳಾಗದೇ ನಿರಂತರ ದುಡಿಮೆಯ ಮನೋಭಾವ ಹಾಗೂ ತಾಳ್ಮೆ ರೂಢಿಸಿಕೊಂಡರೆ ಜೀವನದಲ್ಲಿ ಸುಖಮಯವಾಗಿರಲು ಸಾಧ್ಯ’ ಎಂದರು. ಪ್ರಮುಖರಾದ ಅಶ್ವತ್ಥ, ಪ್ರಸನ್ನಕುಮಾರ್, ಜೋಷಿ, ಶ್ರೀಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.