ADVERTISEMENT

ಚಿಕ್ಕಮಾಲೂರಿನ ಮೆಚ್ಚಿನ ಮಗ...

​ಪ್ರಜಾವಾಣಿ ವಾರ್ತೆ
Published 28 ಮೇ 2017, 5:51 IST
Last Updated 28 ಮೇ 2017, 5:51 IST
ಚಿಕ್ಕಮಾಲೂರು ಗ್ರಾಮದಲ್ಲಿ ನಿರ್ಮಾಣವಾಗಿರುವ ಬಯಲು ರಂಗಮಂದಿರ
ಚಿಕ್ಕಮಾಲೂರು ಗ್ರಾಮದಲ್ಲಿ ನಿರ್ಮಾಣವಾಗಿರುವ ಬಯಲು ರಂಗಮಂದಿರ   

ತನ್ನ ಹುಟ್ಟೂರಿನ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎನ್ನುವ ಕಾಳಜಿ ಕೆಲವೇ ಕೆಲವು ಅಧಿಕಾರಿಗಳಿಗೆ ಮಾತ್ರ ಇರುತ್ತದೆ. ಅಂತಹ ಅಧಿಕಾರಿಗಳಲ್ಲಿ ಲಿಂಚಿ ನಾಗರಾಜು ಒಬ್ಬರು. ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಗ್ರಾಮದವರಾದ ನಾಗರಾಜು, ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೂಲಿ ಕಾರ್ಮಿಕರಾದ ಲಿಂಗಪ್ಪ ಹಾಗೂ ಮುದ್ದಮ್ಮ ಅವರ ಮಗನಾದ ನಾಗರಾಜು ಅವರ ವಿದ್ಯಾಭ್ಯಾಸಕ್ಕೆ ಶಿಕ್ಷಕರು ಹಾಗೂ ಗ್ರಾಮಸ್ಥರು ನೆರವಾದರು. ಆ ನೆರವು ಸದ್ಬಳಕೆ ಮಾಡಿಕೊಂಡು  ಅವರು ಕೆಎಎಸ್ ಅಧಿಕಾರಿಯೂ ಆದರು. ಅಧಿಕಾರಿಯಾದರೂ ತಾವು ನಡೆದ ಹಾದಿ ಮರೆಯಲಿಲ್ಲ. ಗ್ರಾಮದಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು ಎನ್ನುವ ಅವರ ಆಸೆ ಈಗ ಕಾರ್ಯಗತವಾಗುತ್ತಿದೆ.  

ತಮ್ಮ ತಂದೆ– ತಾಯಿಯ ಹೆಸರಿನಲ್ಲಿ ಗ್ರಾಮದಲ್ಲಿ ವೃದ್ಧಾಶ್ರಮ ಹಾಗೂ  ಬಯಲುರಂಗ ಮಂದಿರ ನಿರ್ಮಿಸಿದ್ದಾರೆ. 15 ವೃದ್ಧರು ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.
ಅಭಿಮಾನಿಗಳು ಕೂಡಿ ರಚಿಸಿರುವ ಲಿಂಚಿ ಅಭಿಮಾನಿ ಬಳಗವು ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿದೆ. ನಾಗರಾಜ್ ಚಿಕ್ಕಮಾಲೂರಿನ ಸಮಗ್ರ ಅಭಿವೃದ್ಧಿಯ ಕನಸು ಹೊತ್ತಿದ್ದಾರೆ.

ADVERTISEMENT

ವಿದ್ಯಾರ್ಥಿಗಳಿರುವ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ ತಮ್ಮ ಸ್ವಂತ ಹಣದಿಂದ ವಿದ್ಯುತ್ ಸಂಪರ್ಕ ಕೊಡಿಸುತ್ತಿದ್ದಾರೆ. ಹೀಗೆ ಹಲವು ರೀತಿ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ.

ಪರಿಹಾರ ನೀಡಿದರು: ಒಮ್ಮೆ ದೇವನಹಳ್ಳಿ ಬಳಿ ಬಸ್ ಅಪಘಾತ ಸಂಭವಿಸಿತು. ಬಸ್‌ನಲ್ಲಿದ್ದ 18 ಜನರಲ್ಲಿ ಆರು ಜನರು ಮೃತಪಟ್ಟರು. ಉಳಿದವರು ತೀವ್ರವಾಗಿ ಗಾಯಗೊಂಡರು. ಆ ಸಮಯದಲ್ಲಿ ದೇವನಹಳ್ಳಿ ಉಪವಿಭಾಗಾಧಿಕಾರಿಯಾಗಿದ್ದ (ಎಸಿ) ನಾಗರಾಜು ಅವರು ಗಾಯಾಳುಗಳ ಚಿಕಿತ್ಸೆ ವೆಚ್ಚಕ್ಕೆ ಸಾರ್ವಜನಿಕರಿಂದ ₹ 26 ಲಕ್ಷ ಹಣ ಸಂಗ್ರಹಿಸಿದರು.

ಮೃತ ವ್ಯಕ್ತಿಗಳ ಕುಟುಂಬದವರಿಗೆ ಪರಿಹಾರ ನೀಡಿ ಮಾನವೀಯತೆ ಮೆರೆದರು. ಬೆಂಗಳೂರಿನಲ್ಲಿ ಎಸಿ ಆಗಿದ್ದ ಅವಧಿಯಲ್ಲಿ ಮಾಡಿದ ಕಾರ್ಯಗಳು ಜನರಿಂದ ಪ್ರಶಂಸೆಗೆ ಪಾತ್ರವಾಗಿವೆ. ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಜಮೀನಿನ ಒತ್ತುವರಿಯನ್ನು ಅವರು ತೆರವುಗೊಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.