ADVERTISEMENT

ಜನರಿಗೆ ಕುಡಿಯೋಕೆ ಒಳ್ಳೆ ನೀರ್ ಕೊಡ್ರಿ

ಜಟ್ಟಿ ಅಗ್ರಹಾರ ಹೇಮಾವತಿ ಶುದ್ಧೀಕರಣ ಘಟಕಕ್ಕೆ ಶಾಸಕ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:59 IST
Last Updated 14 ಏಪ್ರಿಲ್ 2017, 4:59 IST

ಕೊರಟಗೆರೆ: ‘ರೀ ಸಿಒ ನೀವ್ ಕಥೆ ಏಳೋಕೆ ಬರಬೇಡ್ರೀ, ನೀವ್ ಹೇಳೋ ಕಥೆ ಕೇಳೋಕೆ ನಾನ್ ರೆಡಿ ಇಲ್ಲ. ಮೊದ್ಲು ಜನರಿಗೆ ಕುಡಿಯೋಕೆ ಒಳ್ಳೆ ನೀರ್ ಕೊಡ್ರಿ. ಅದಕ್ಕೆ ಏನ್ ಕ್ರಮ ಕೈಗೊಂಡಿದ್ದೀರಿ ಅನ್ನೋದನ್ನ ಹೇಳ್ರಿ ಮೊದ್ಲು’ ಎಂದು ಶಾಸಕ ಪಿ.ಆರ್.ಸುಧಾಕರ್‌ ಲಾಲ್‌ ಅವರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೇರಿ ಹಾಗೂ ಪಟ್ಟಣ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಪಟ್ಟಣಕ್ಕೆ ಶುದ್ಧ ನೀರು ಸರಬರಾಜಾಗುತ್ತಿಲ್ಲ. ಹೇಮಾವತಿ ಶುದ್ಧ ನೀರಿನ ಘಟಕದಿಂದ ಕುಡಿಯಲು ಕಲುಷಿತ ನೀರು ಬಿಡಲಾಗುತ್ತಿದೆ’ ಎಂದು ಸ್ಥಳೀಯರು ಶಾಸಕರ ಬಳಿ ಅಳಲು ತೋಡಿಕೊಂಡರು.

‘ಬರಗಾಲದಲ್ಲಿ ಕುಡಿಯುವ ನೀರು ನಿರ್ವಹಣೆ ಮಾಡುವುದೇ ಒಂದು ದೊಡ್ಡ ಸಾಹಸ. ಪಟ್ಟಣದ ಜನ ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುವ ಸಂದರ್ಭ ಬಂದಿದೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಶಾಸಕರು ತಾಕೀತು ಮಾಡಿದರು.

‘ಹೇಮಾವತಿ ಶುದ್ಧ ನೀರಿನ ಘಟಕದಲ್ಲಿ ಅಳವಡಿಸಿರುವ ಯಂತ್ರಗಳು ಸಮರ್ಪಕವಾಗಿಲ್ಲ. ಪೈಪ್ ಜೋಡಣೆ ಸರಿಯಾಗಿಲ್ಲದ ಕಾರಣ ಕಲುಷಿತ ನೀರು ಸರಬರಾಜಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಕೆಲವರು ಅಧಿಕಾರಿಗಳ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂಬ ದೂರು ಕೇಳಿ ಬಂದ ಕಾರಣ ಯಾರ ಮುಲಾಜಿಗೂ ಒಳಗಾಗದೇ ನೀರಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಸೂಚನೆ ನೀಡಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಸದಸ್ಯರಾದ ಕೆ.ಎಲ್. ಆನಂದ್, ಸೈಯದ್ ಸೈಫ್ ಉಲ್ಲಾ, ಎಸ್.ಪವನ್‌ಕುಮಾರ್‌,ಮುಖಂಡರಾದ ಮುಕ್ತಿಯಾರ್, ಗಣೇಶ್, ರಾಘವೇಂದ್ರ, ಕೆ.ವಿ.ಪುರುಷೋತ್ತಮ್, ಕೆ.ಆರ್.ಓಬಳರಾಜು, ಕೆ.ಬಿ.ಲೋಕೇಶ್, ಮುಖ್ಯಾಧಿಕಾರಿ ಶ್ರೀನಿವಾಸ್, ಚಂದ್ರಶೇಖರ್, ಚಂದ್ರಶೇಖರ್, ಕಿರಿಯ ಎಂಜಿನಿಯರ್‌ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.