ADVERTISEMENT

ಜಾತಿಯ ಬೆಂಕಿ ಹಚ್ಚಬೇಡಿ: ಶಿಕ್ಷಣ ಜ್ಯೋತಿ ಬೆಳಗಿ

​ಪ್ರಜಾವಾಣಿ ವಾರ್ತೆ
Published 14 ಮೇ 2011, 6:40 IST
Last Updated 14 ಮೇ 2011, 6:40 IST

ತುಮಕೂರು: ಜಾತೀಯತೆ ಎಲ್ಲ ರಂಗಗಳನ್ನೂ ಆವರಿಸಿದ್ದು, ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ. ಜಾತಿಯ ಬೆಂಕಿ ಹಚ್ಚುವ ಬದಲು ಜನರು ಶಿಕ್ಷಣದ ಜ್ಯೋತಿ ಬೆಳಗುವ ಕೆಲಸ ಮಾಡಬೇಕು ಎಂದು ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜಾತೀಯತೆ ಇಂದು ನ್ಯಾಯಾಂಗವನ್ನೂ ಬಿಟ್ಟಿಲ್ಲ. ಜನರು ಶಿಕ್ಷಿತರಾಗುವುದರಿಂದ ಜಾತೀಯತೆ ತೊಲಗಿಸಲು ಇರುವ ಪರಿಹಾರ ಮಾರ್ಗವಾಗಿದೆ ಎಂದರು.

ಕೈಗಾರಿಕಾ ಕ್ರಾಂತಿಯಿಂದಾಗಿ ಶಿಕ್ಷಣದ ಪ್ರಜಾಪ್ರಭುತ್ವೀಕರಣ ನಡೆಯಿತು. ಇಂದು ಜ್ಞಾನದ ಅರ್ಥವ್ಯವಸ್ಥೆ ಹಾಗೂ ಕೈಗಾರಿಕಾ ಅರ್ಥವ್ಯವಸ್ಥೆಗಳು ಪರಸ್ಪರ ವಿರೋಧಿ ಪರಿಕಲ್ಪನೆಗಳಾಗಿ ಉಳಿದಿಲ್ಲ. ಆದರೆ ನಾವಿಂದು ಸಾಂಸ್ಕೃತಿಕ ಸ್ಥಿತ್ಯಂತರದಲ್ಲಿದ್ದೇವೆ. ಪ್ರಸ್ತುತ ಸಮಾಜದಲ್ಲಿ ಬಡತನ, ಶ್ರೀಮಂತಿಕೆಯ ವ್ಯಾಖ್ಯಾನಗಳು ಬದಲಾಗಿವೆ. ಜ್ಞಾನದ ಶ್ರೀಮಂತಿಕೆ ಮತ್ತು ಜ್ಞಾನದ ಬಡತನ ಎಂಬ ಎರಡು ಪ್ರಕಾರಗಳಷ್ಟೇ ಉಳಿದುಕೊಂಡಿವೆ. ಕನ್ನಡದ ಮೇಲೆ ಪ್ರಭುತ್ವ ಹೊಂದಿರುವಂತೆಯೇ ಇಂಗ್ಲಿಷ್ ನಲ್ಲೂ ಒಳ್ಳೆಯ ಹಿಡಿತ ಹೊಂದಿರುವುದೂ ಅವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿ.ವಿ. ಕುಲಸಚಿವ (ಪರೀಕ್ಷಾಂಗ) ಪ್ರೊ.ಎನ್.ಲಕ್ಷ್ಮೀಕಾಂತ್, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಜ್ಞಾನ, ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದರು.

ಹಿರಿಯ ಭೂವಿಜ್ಞಾನಿ ಹಾಗೂ ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರನ್ನು ಸನ್ಮಾನಿಸ ಲಾಯಿತು. ಕಲಾ ಕಾಲೇಜು ಪ್ರಾಂಶುಪಾಲ ಟಿ.ಎನ್.ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಉಪಕುಲಸಚಿವ (ಶೈಕ್ಷಣಿಕ) ಡಾ.ಎಸ್.ಶ್ರೀನಿವಾಸ, ಉಪಕುಲಸಚಿವ (ಪರೀಕ್ಷಾಂಗ) ಎನ್.ಪ್ರಸನ್ನ ಕುಮಾರ್, ವಿಜ್ಞಾನ ಕಾಲೇಜು ಪ್ರಾಂಶುಪಾಲ ಬಿ.ಎಲ್.ಮುಕುಂದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.