ADVERTISEMENT

ಜಿಎಸ್‌ಟಿಯಲ್ಲಿ ವ್ಯಾಪಾರದ ಭವಿಷ್ಯ

ಸರಕು ಮತ್ತು ಸೇವಾ ತೆರಿಗೆ ವಲಸೆ ಚರ್ಚಾಗೋಷ್ಠಿಯಲ್ಲಿ ಸೇವಾ ತೆರಿಗೆ ಮುಖ್ಯ ಆಯುಕ್ತ ವಿನೋದ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 4:43 IST
Last Updated 23 ಮಾರ್ಚ್ 2017, 4:43 IST

ತುಮಕೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಶೀಘ್ರವಾಗಿ  ಅಳವಡಿಸಿಕೊಳ್ಳಬೇಕು. ಇದರಿಂದ ವ್ಯವಹಾರವೂ ಸುಧಾರಿಸಲಿದೆ. ನಿಮ್ಮ ವ್ಯಾಪಾರದ ಭವಿಷ್ಯವು ಇದರಲ್ಲೇ ಅಡಗಿದೆ’ ಎಂದು ಸೇವಾ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ವಿನೋದ್‌ಕುಮಾರ್ ಹೇಳಿದರು.

ಬುಧವಾರ ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಬೆಂಗಳೂರು ವಲಯ ಹಾಗೂ ತುಮಕೂರು ವಾಣಿಜ್ಯೋದ್ಯಮ ಸಂಸ್ಥೆ , ಟ್ಯಾಪಿ ಮಾನ್ಯತೆ ಪಡೆದ ಎ.ಎಸ್‌.ಟೆಕ್ನಾಲಜೀಸ್‌ ಆಶ್ರಯದಲ್ಲಿ ಏರ್ಪಡಿಸಿದ್ದ ‘ಸರಕು ಮತ್ತು ಸೇವಾ ತೆರಿಗೆ ವಲಸೆ’ ಕುರಿತ ಚರ್ಚಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಜಿಎಸ್‌ಟಿಗೆ ಸಂಬಂಧಪಟ್ಟ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಇದರಲ್ಲಿ ವಿಶೇಷವಾಗಿ ರೇಟಿಂಗ್ ವ್ಯವಸ್ಥೆ ಇದೆ. ನಿಮ್ಮೊಂದಿಗೆ ವ್ಯವಹಾರ ನಡೆಸುವವರು ನಿಮ್ಮ ವ್ಯಾಪಾರದ ಸ್ಥಾನಮಾನ ತಿಳಿಯಲು ರೇಟಿಂಗ್‌ನಿಂದಲೇ ತಿಳಿಯಬಲ್ಲರು. ವ್ಯಾಪಾರದ ಭವಿಷ್ಯವನ್ನು  ಈ ರೇಟಿಂಗ್‌ ನಿರ್ಧರಿಸುತ್ತದೆ’ ಎಂದು ಹೇಳಿದರು.

‘ತುಮಕೂರಿನಲ್ಲಿಯೇ ಅಬಕಾರಿ ಮತ್ತು ಸೇವಾ ಇಲಾಖೆ ಕಚೇರಿ ಇದೆ. ಜಿಎಸ್‌ಟಿ ಬಗ್ಗೆ ಏನೇ ಸಂಶಯಗಳಿದ್ದರೂ ಹೋಗಿ ಪರಿಹರಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸೇವಾ ತೆರಿಗೆ ಆಯುಕ್ತ ಜಿ.ನಾರಾಯಣಸ್ವಾಮಿ ಮಾತನಾಡಿ, ‘ಜಿಎಸ್‌ಟಿ ಎಂದರೆ ಇಡೀ ದೇಶವ್ಯಾಪಿ ಒಂದು ಸರಳೀಕೃತ ತೆರಿಗೆ ವ್ಯವಸ್ಥೆಯಾಗಿದೆ. ಒಂದೇ ದೇಶ, ಒಂದೇ ತೆರಿಗೆ, ಒಂದೇ ಮಾರುಕಟ್ಟೆ ಎಂಬ ಪರಿಕಲ್ಪನೆ ಹೊಂದಿದೆ’ ಎಂದು ತಿಳಿಸಿದರು.

‘ಈ ಬಗ್ಗೆ ವ್ಯವಹಾರಸ್ಥರು ಸರಿಯಾಗಿ ತಿಳಿದುಕೊಳ್ಳುವುದು ಅತ್ಯವಶ್ಯವಾಗಿದೆ. ಜಿಎಸ್‌ಟಿಯಲ್ಲೂ ಎರಡು ವಿಭಾಗಗಳಿದ್ದು, ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಇವೆ. ಮಾರ್ಚ್‌ 31ರೊಳಗೆ ಜಿಎಸ್‌ಟಿ ವ್ಯವಸ್ಥೆಗೆ ನೋಂದಣಿ ಮಾಡಿಸಿಕೊಳ್ಳಲೇಬೇಕು. ಇಲ್ಲದೇ, ಇದ್ದರೆ ಜುಲೈ ನಂತರ ತೊಂದರೆ ಪಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಜಿಎಸ್‌ಟಿ ಈಗಾಗಲೇ 150 ದೇಶಗಳಲ್ಲಿ ಜಾರಿಯಲ್ಲಿದೆ. ನಮ್ಮ ದೇಶದಲ್ಲಿ ಈಗ ಜಾರಿಯಾಗುತ್ತಿದೆ. ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲೇಬೇಕು. ಏನಾದರೂ ಗೊಂದಲಗಳಿದ್ದರೆ ನಮ್ಮ ಇಲಾಖೆಯ ಹೆಲ್ಪ್‌ ಡೆಸ್ಕ್‌ ನೆರವು ಪಡೆಯಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.