ಮಧುಗಿರಿ: ತಾಲ್ಲೂಕು ಅರಳಾಪುರ ಗ್ರಾಮದ ಮಹೇಶ್ವರ ದೇವಾಲಯಕ್ಕೆ ತಳವರ್ಗದ ಸಮುದಾಯದವರು ಪ್ರವೇಶಿಸುತ್ತಾರೆ ಎಂದು ನೆಪವೊಡ್ಡಿ ಹಲವಾರು ತಿಂಗಳಿನಿಂದ ದೇವಾಲಯದ ಬಾಗಿಲು ತೆಗೆಯುತ್ತಿಲ್ಲ ಇದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ತಾಲ್ಲೂಕಿನ ಪುರವರ ಹೋಬಳಿಯ ಅರಳಾಪುರ ಗ್ರಾಮದ ಹೃದಯ ಭಾಗದಲ್ಲಿ ಮಹೇಶ್ವರ ದೇವಾಲಯವಿದೆ. 20 ವರ್ಷಗಳ ಹಿಂದೆ ಮಹೇಶ್ವರಮ್ಮ ದೇವಾಲಯವನ್ನು ಗ್ರಾಮಸ್ಥರೆಲ್ಲರೂ ಸೇರಿ ಜೀರ್ಣೋದ್ಧಾರ ಮಾಡಿದ್ದರು. ಗ್ರಾಮದಲ್ಲಿ ಆಂಜನೇಯ, ಮಹೇಶ್ವರಮ್ಮ ಮತ್ತು ಮಾರಮ್ಮ ದೇವಾಲಯಗಳಿದ್ದು, ಆಂಜನೇಯ ಸ್ವಾಮಿ ಮತ್ತು ಮಹೇಶ್ವರಮ್ಮ ದೇವಾಲಯಕ್ಕೆ ಮಾತ್ರ ಈ ವರ್ಣ ಭೇದವು ಅಂಟಿಕೊಂಡಿದೆ. ಆದ್ದರಿಂದ ದೇವಾಲಯದ ಮೂರ್ತಿ ಹಾಗೂ ಪೂಜಾ ಸಾಮಾಗ್ರಿಗಳಿಗೆ ದೂಳು ಹಿಡಿಯುತ್ತಿವೆ ಎಂದು ಆರೋಪಿಸಿದರು.
ದೇವಿಯ ಜಾತ್ರಾ ಮಹೋತ್ಸವ ನಡೆದು ಎರಡು ವರ್ಷಗಳು ಕಳೆದಿವೆ. ಮೇಲ್ವರ್ಗದ ಜನರು ಗ್ರಾಮದ ತಳ ಸಮುದಾಯದ ವಿದ್ಯಾವಂತರಿಗೂ ಸಣ್ಣ ಪುಟ್ಟ ವ್ಯಾಜ್ಯ ತೆಗೆದು ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ಕೆಲ ಯುವಕರು ಗ್ರಾಮ ತ್ಯಜಿಸಲು ಸಿದ್ಧರಾಗಿದ್ದಾರೆ ಎಂದು ಗ್ರಾಮದ ಹಿರಿಯರು ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ಪೂಜೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ದೇವಾಲಯ ಪ್ರವೇಶಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.