ADVERTISEMENT

ಕಾವೇರಿ ತೀರ್ಪು: ಹೋರಾಟಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 6:58 IST
Last Updated 23 ಜನವರಿ 2018, 6:58 IST

ಗುಬ್ಬಿ: ‘ಇನ್ನು ಮೂರು ವಾರದಲ್ಲಿ ಕಾವೇರಿ ನೀರಾವರಿ ತೀರ್ಪು ಹೊರಬೀಳಲಿದೆ. ಆದ್ದರಿಂದ ಮುಂದಿನ ಹೋರಾಟಕ್ಕೆ ಸಿದ್ಧತೆ ಮಾಡುತ್ತಿದ್ದೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು. ತಾಲ್ಲೂಕಿನ ಕಡಬ ಗ್ರಾಮದಲ್ಲಿ ಸೋಮವಾರ ಕೊಲ್ಲಾಪುರದಮ್ಮ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಾವೇರಿ ನೀರಿಗಾಗಿ ತಮಿಳುನಾಡಿನ ಸಂಸದರು ಹೋರಾಡುತ್ತಾರೆ. ಆದರೆ ಇಲ್ಲಿನ ರಾಷ್ಟ್ರೀಯ ಪಕ್ಷಗಳ ಸಂಸದರು ಹೈಕಮಾಂಡ್ ಹೇಳಿದಂತೆ ಕೇಳುತ್ತಾರೆ. ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬಂದರೆ, ಕಾವೇರಿ, ಮಹದಾಯಿ ನೀರಿನ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಬಹುದು’ಎಂದು ಹೇಳಿದರು.

‘ಕಾವೇರಿ ನ್ಯಾಯಾಧಿಕರಣದ ತೀರ್ಪು ರಾಜ್ಯದ ಪರವಾಗಿ ಬಂದರೆ ತುಮಕೂರು ಜಿಲ್ಲೆಗೆ ಹೆಚ್ಚು ನೀರು ಸಿಗಲಿದೆ. ಹೇಮಾವತಿ ನಾಲೆಯಿಂದ ಕಾವೇರಿ ಮೂಲಕ 23 ಟಿಂಎಂಸಿ ಅಡಿ ನೀರನ್ನು ಹರಿಸಲಾಗುತ್ತಿದೆ. ಇಲ್ಲಿ ತುಮಕೂರು ಜಿಲ್ಲೆಗೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ರೈತರು ಹೋರಾಡಬೇಕಿದೆ’ ಎಂದರು. ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ‘ ರಾಜ್ಯದ ರೈತರ ಪರವಾಗಿ ದನಿ ಎತ್ತುವ ದೇವೇಗೌಡರಿಗೆ ಶಕ್ತಿ ತುಂಬಬೇಕಿದೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಅಣಪನಹಳ್ಳಿ ಕ್ಷೇತ್ರದ ನರಸಿಂಹ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಗ್ರಾ.ಪಂ ಅಧ್ಯಕ್ಷೆ ಯಶೋದಮ್ಮ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ನಿರ್ದೇಶಕ ವೀರಭದ್ರಯ್ಯ, ಸಿದ್ಧಗಂಗಮ್ಮ, ಟಿ.ವೈ. ಯೋಗಾನಂದಮೂರ್ತಿ, ಬಾಲಕೃಷ್ಣ, ಶಶಿಧರ್, ದಾಸಪ್ಪ, ದರ್ಶನ್, ಪ್ರಭಾಕರ್, ನಾರಾಯಣಪ್ಪ, ಗೋವಿಂದರಾಜು, ರಮೇಶ್, ಚಿಕ್ಕತಿಮ್ಮಯ್ಯ, ಗೋವಿಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.