ಉಡುಪಿ: ಮದರಸಗಳ ಆಧುನೀಕರಣಕ್ಕಾಗಿ ಕೇಂದ್ರದ ಎನ್ಡಿಎ ಸರ್ಕಾರ ₨ 100 ಕೋಟಿ ನೀಡಿರುವುದನ್ನು ವಿರೋಧಿಸಿ, ತೆಲಂಗಾಣದಲ್ಲಿ ಉರ್ದು ಭಾಷೆಯನ್ನು ದ್ವಿತೀಯ ಭಾಷೆಯಾಗಿ ಮಾಡಿರುವ ಕ್ರಮವನ್ನು ಖಂಡಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಸಂಘಟನೆಯ ಸದಸ್ಯರು ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಧಾರ್ಮಿಕ ಉನ್ಮಾದ ಹೆಚ್ಚಿಸುವ ಮತ್ತು ರಾಷ್ಟ್ರ ವಿರೋಧಿಗಳಿಗೆ ಪ್ರೇರೇಪಣೆ ನೀಡುವ ಕೆಲಸಗಳು ಮದರಸಗಳಲ್ಲಿ ನಡೆಯುತ್ತಿವೆ ಎಂಬ ಆರೋಪಗಳಿವೆ. ಇಂತಹ ಮದರಸಗಳ ಆಧುನೀಕರಣಕ್ಕೆ ಹಣ ನೀಡುವುದು ಸಮಂಜಸವಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು. ಮದರಸಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ತಿಳಿಯಲು ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಉರ್ದು ಭಾಷೆಯನ್ನು ರಾಜ್ಯದ ದ್ವಿತೀಯ ಭಾಷೆ ಎಂದು ತೆಲಂಗಾಣದಲ್ಲಿ ಘೋಷಿಸಲಾಗಿದೆ. ಈ ಭಾಷೆಗೆ ಮಾನ್ಯತೆ ನೀಡುವುದು ಸರಿಯಲ್ಲ. ಅಲ್ಲದೆ ಎಲ್ಲ ರಾಜ್ಯಗಳೂ ಸ್ಥಳೀಯ ಭಾಷೆಗಳಿಗೆ ದ್ವಿತೀಯ ಭಾಷೆಯ ಸ್ಥಾನಮಾನ ನೀಡುವ ಅಪಾಯ ಇದೆ. ಆದ್ದರಿಂದ ಇದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಮಹಾರಾಷ್ಟ್ರದ ನಾಸಿಕ್ನಲ್ಲಿ 2015 ಜುಲೈನಲ್ಲಿ ಸಿಂಹಸ್ಥ ಕುಂಭಮೇಳದ ಧ್ವಜಾರೋಹಣ ನಡೆಯಲಿದೆ.
ಈ ಮೇಳದ ಆಚರಣೆ ಹಿನ್ನೆಲೆಯಲ್ಲಿ ಮೂಲ ಸೌಲಭ್ಯ ಕಲ್ಪಿಸಿಕೊಡಲು ಕೈಗೊಂಡಿರುವ ಕಾಮಗಾರಿಗಳನ್ನು ಸಮಾರೋಪಾದಿಯಲ್ಲಿ ಮಾಡಿ ಪೂರ್ಣಗೊಳಿಸಬೇಕು. ಕುಂಭಮೇಳಕ್ಕಾಗಿ ಸರ್ಕಾರ ಶಾಶ್ವತ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖಂಡರಾದ ರಾಂಶೆಟ್ಟಗಾರ್, ಗೋವಿಂದದಾಸ್, ಪ್ರವೀಣ್ ಕುಮಾರ್, ಉದಯ್ ಕುಮಾರ್ ಶೆಟ್ಟಿ, ಚಿತ್ತರಂಜನ್ ಹೆಗ್ಡೆ, ನವೀನ್ ಕುಮಾರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.