ಉಡುಪಿ: ಕಡೆಗೋಲು ಕೃಷ್ಣನ ಊರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬುಧವಾರ ಸಂಭ್ರಮ, ಭಕ್ತಿ ಭಾವದಿಂದ ಆಚರಿಸಲಾಯಿತು. ಸಾವಿರಾರು ಭಕ್ತರು ಮಠಕ್ಕೆ ಬಂದು ದೇವರ ದರ್ಶನ ಪಡೆದರು. ಭಾರಿ ಸಂಖ್ಯೆಯಲ್ಲಿ ಜನರು ಬಂದಿದ್ದ ಪರಿಣಾಮ, ಸರದಿ ಸಾಲು ರಾಜಾಂಗಣದ ವರೆಗೂ ಇತ್ತು. ಹೂ ಮಾರಾಟಗಾರರು ರಥಬೀದಿಗೆ ಹೊಸ ಕಳೆ ತಂದಿದ್ದರು.
ಕೃಷ್ಣ ಮಠದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ, ವಿಧಾನಗಳು ಆರಂಭಗೊಂಡಿದ್ದವು. ‘ಶ್ರೀಮನ್ನಾರಾಯಣ ಕೃಷ್ಣಾವತಾರ ಕಾಲದಲ್ಲಿ ಕಾಣಿಸಿಕೊಂಡ ರೂಪ’ ವಿಶೇಷ ಅಲಂಕಾರವನ್ನು ದೇವರಿಗೆ ಮಾಡಲಾಗಿತ್ತು.
ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕಿರಿಯ ವಿಶ್ವ ಪ್ರಸನ್ನ ಸ್ವಾಮೀಜಿ ಅವರು ಉಪವಾಸ ಆಚರಿಸಿ ಕೃಷ್ಣನಿಗೆ ಪೂಜೆ ಸಲ್ಲಿಸಿದರು. ಸಂಪ್ರದಾಯದಂತೆ ಇಬ್ಬರೂ ಸಿಹಿ ಉಂಡೆ ಕಟ್ಟಿದರು.
ವಿಶ್ವೇಶತೀರ್ಥ ಸ್ವಾಮೀಜಿ ಅವರು ಮಧ್ಯರಾತ್ರಿ 12.30ರ ಸುಮಾರಿಗೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಿಲ್ವಾರ್ಚನೆ, ಪೂಜೆ ಸಲ್ಲಿಸಿದರು. ಮಠಕ್ಕೆ ಬಂದಿದ್ದ ನೂರಾರು ಭಕ್ತರಿಗೂ ಅರ್ಘ್ಯ ಪ್ರದಾನ ಮಾಡಲು ಅವಕಾಶ ಕಲ್ಪಿಸಲಾಯಿತು.ಮಠದ ವತಿಯಿಂದ ಆಯೋಜಿಸಿದ್ದ ಕೃಷ್ಣ ವೇಷ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು. ಹುಲಿ ವೇಷ ಹಾಗೂ ವಿವಿಧ ವೇಷಧಾರಿಗಳ ಭರಾಟೆಯೂ ಜೋರಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.