ADVERTISEMENT

‘ಖುಷಿಯನ್ನು ಖರೀದಿಸಲು ಅಸಾಧ್ಯ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 5:23 IST
Last Updated 3 ಡಿಸೆಂಬರ್ 2017, 5:23 IST

ಕುಂದಾಪುರ: ‘ಸಂತೋಷ ಹಾಗೂ ಖುಷಿಯನ್ನು ಖರೀದಿ ಮಾಡಲು ಸಾಧ್ಯವಿಲ್ಲ. ನಾವೇ ಸೃಷ್ಟಿಸಿಕೊಳ್ಳ ಬೇಕು. ಖುಷಿಯ ವಾತಾವರಣ ಹಾಗೂ ತನ್ಮಯತೆಯ ಓದು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಯಶ ಸ್ಸನ್ನು ತಂದುಕೊಡುತ್ತದೆ’ ಎಂದು ಕುಂದಾಪುರ ವಲಯ ಶಿಕ್ಷಣಾಧಿಕಾರಿ ಅಶೋಕ್‌ ಕಾಮತ್‌ ಹೇಳಿದರು.

ಇಲ್ಲಿನ ಬೋರ್ಡ್‌ ಹೈಸ್ಕೂಲ್‌ನ ಶ್ರೀಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಖಾರ್ವಿಕೇರಿಯ ವಿದ್ಯಾರಂಗ ಮಿತ್ರ ಮಂಡಳಿಯ ಆಶ್ರಯದಲ್ಲಿ ನಡೆದ ಪರೀಕ್ಷಾ ಪೂರ್ವ ಮಾಹಿತಿ ಶಿಬಿರ ಹಾಗೂ ವಿದ್ಯಾರ್ಥಿ ವೇತನ ಅರ್ಜಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಓದಿನ ಉತ್ತಮ ಅಭ್ಯಾಸಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸು ವಷ್ಟು ಶಕ್ತಿಶಾಲಿಯಾಗಿರುತ್ತದೆ. ನಮ್ಮ ಬದುಕಿನ ಗುರಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಸ್ವಷ್ಟತೆ ಇರಬೇಕು. ವಿಷಯಗಳ ಆಯ್ಕೆ ಮಾಡುವಾಗಲೂ ಪರಾವಲಂಬಿಗಳಾಗದೆ ಸ್ವತಂತ್ರ ತೀರ್ಮಾನ ಕೈಗೊಳ್ಳುವ ಇಚ್ಛಾಶಕ್ತಿ ಯನ್ನು ತೋರಬೇಕು. ಗಾಳಿ ಬಂದ ಕಡೆಗೆ ತೂರಿಕೊಳ್ಳುವ ಮನೋಭಾವದಿಂದ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥ ವಾಗಿ ಎದುರಿಸಲು ಸಾಧ್ಯವಿಲ್ಲ ಎಂದರು.

ADVERTISEMENT

ವಿದ್ಯಾನಿಧಿ ಯೋಜನೆಯ ಮಾಜಿ ಅಧ್ಯಕ್ಷ ರವಿ.ಟಿ.ನಾಯ್ಕ್ ಮುಂಬೈ ಮಾತನಾಡಿ, ‘ವಿದ್ಯಾರ್ಥಿ ಜೀವನದ ಹಂತದಲ್ಲಿಯೇ ಭವಿಷ್ಯದ ಗುರಿಯನ್ನು ನಿಶ್ಚಯ ಮಾಡಿಕೊಂಡಿರಬೇಕು. ಕಲಿಕೆಯಿಂದ ವಿದ್ಯೆ, ಕರ್ಮದಂತೆ ಫಲ, ಪ್ರಯತ್ನದಿಂದ ಯಶಸ್ಸು ಎನ್ನುವ ಜೀವನ ಸೂತ್ರಕ್ಕೆ ನಾವು ಬದ್ಧತೆಯನ್ನು ತೋರಬೇಕು. ಯಾವುದೇ ಪರಿಣಾಮಕಾರಿ ಪ್ರಯತ್ನಗಳಿಲ್ಲದೆ ಯಶಸ್ಸು ಸಾಧ್ಯವಿಲ್ಲ ಎನ್ನುವ ಸತ್ಯದ ಅರಿವಿರಬೇಕು. ಮುಂದೇನಾಗಬೇಕು ಎನ್ನುವ ಪೂರ್ವ ನಿರ್ಧಾರಗಳನ್ನು ಮಾಡಿಕೊಂಡೆ ಮುಂದಡಿ ಇಡುವುದರಿಂದ ಉನ್ನತ ಮಟ್ಟಕ್ಕೆಏರಲು ಸಾಧ್ಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಸ್ವಾಗತಿಸಿದರು. ವಿದ್ಯಾನಿಧಿ ಯೋಜನೆಯ ಅಧ್ಯಕ್ಷ ದಿನಕರ ಪಟೇಲ್‌ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು. ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಕೋಡಿ ಮಹೇಶ್ ಪೂಜಾರಿ, ಪುರಸಭೆ ಮಾಜಿ ಸದಸ್ಯ ಪ್ರಕಾಶ್.ಆರ್.ಖಾರ್ವಿ. ವಿದ್ಯಾನಿಧಿ ಯೋಜನಾಧಿಕಾರಿ ವರದರಾಜ್ ಇದ್ದರು. ಸೌಮ್ಯ ಶಂಕರ ಖಾರ್ವಿ ನಿರೂಪಿಸಿದರು. ಕಾರ್ಯದರ್ಶಿ ಪ್ರಶಾಂತ ಖಾರ್ವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.