ADVERTISEMENT

ಚೋನಮನೆ ಶನೀಶ್ವರ ಮೇಳದ ತಿರುಗಾಟ ಆರಂಭ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2013, 8:45 IST
Last Updated 25 ನವೆಂಬರ್ 2013, 8:45 IST

ಸಿದ್ದಾಪುರ: ಯಕ್ಷಗಾನ ಮೇಳಗಳು ಜನರಲ್ಲಿ ಧಾರ್ಮಿಕ ಭಾವೈಕ್ಯ ಹಾಗೂ ಶ್ರದ್ಧಾ ಭಕ್ತ ಹೆಚ್ಚಿಸುವ ಮೂಲಕ ಜನರಲ್ಲಿ ಸಂತೃಪ್ತ ಜೀವನಕ್ಕೆ ಪ್ರೇರಣೆ ನೀಡುತ್ತಿವೆ. ಯಕ್ಷಗಾನ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಲೆಯಾ­ಗಿದ್ದು, ಪುಣ್ಯ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಯಕ್ಷಗಾನ ಕಲೆ ಅಭಿವೃದ್ಧಿ ಪಡಿಸುವಲ್ಲಿ ಸರ್ವರ ಸಹಕಾರದ ಅಗತ್ಯವಿದೆ ಎಂದು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಹುಣ್ಸೆಹಾಡಿ  ಬೋಜ ಶೆಟ್ಟಿ ಹೇಳಿದರು.

ಆಜ್ರಿ ಚೋನಮನೆ ಶನೀಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಯಕ್ಷಗಾನ ಮೇಳದ 6ನೇ ವರ್ಷದ ತಿರುಗಾಟದ  ಪ್ರಥಮ ದೇವರ ಸೇವೆಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

74ನೇ ಉಳ್ಳೂರು ಬನಶಂಕರಿ ದೇವಸ್ಥಾನ ಹಾಗೂ ಬ್ರಹ್ಮಬೈದರ್ಕಳ ಗರಡಿ ಮೂಕ್ತೇಸರ ಸಂಜೀವ ಶೆಟ್ಟಿ ಸಂಪಿಗೇಡಿ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರಿನ ಉದ್ಯಮಿ ಹೆಬ್ಬಾಡಿ ಸಂತೋಷ ಶೆಟ್ಟಿ,  ಪತ್ರಕರ್ತ ಭಾಸ್ಕರ ಶೆಟ್ಟಿ ನೇರಳಕಟ್ಟೆ, ಆಜ್ರಿ ಚೋನಮನೆ, ಕ್ಷೇತ್ರದ ಆಡಳಿತ ಧರ್ಮದರ್ಶಿ, ಯಕ್ಷಗಾನ ಮೇಳದ ವ್ಯವಸ್ಥಾಪಕ ಅಶೋಕ ಶೆಟ್ಟಿ ಚೋನಮನೆ, ಸಂಚಾಲಕ ಸದಾನಂದ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು.

ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಕಮಲಶಿಲೆ ಮತ್ತು ಸರ್ಕಾರಿ ಪ್ರೌಢಶಾಲೆ ಸಿದ್ದಾಪುರ ಆಜ್ರಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಗಣಪತಿಗೆ ಹೋಮ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ರಾಜಾ ಸತ್ಯವೃತ ಯಕ್ಷಗಾನ ಸೇವೆ ನಡೆಯಿತು.

ಎಸ್‌.ಜಿ.ನಾಯ್ಕ ಸಿದ್ದಾಪುರ ಸ್ವಾಗತಿಸಿ, ಭುಜಂಗ ಶೆಟ್ಟಿ ಹೆನ್ನಾಬೈಲು ಕಾರ್ಯಕ್ರಮ ನಿರೂಪಿಸಿದರು. ಆಜ್ರಿ ಚೋನಮನೆ ಕ್ಷೇತ್ರದ ಆಡಳಿತ ಧರ್ಮದರ್ಶಿ, ಯಕ್ಷಗಾನ ಮೇಳದ ವ್ಯವಸ್ಥಾಪಕ ಅಶೋಕ ಶೆಟ್ಟಿ ಚೋನಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಶರತ್ ಶೆಟ್ಟಿ ಸಿದ್ದಾಪುರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.