ADVERTISEMENT

ಪರಿಹಾರ ವಿತರಿಸದೆ ಪೈಪ್‌ಲೈನ್ ಕಾಮಗಾರಿ: ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:04 IST
Last Updated 23 ಏಪ್ರಿಲ್ 2017, 10:04 IST

ಪಡುಬಿದ್ರಿ: ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್‌ಪಿಆರ್ಎಲ್ ಕಂಪೆನಿಯ ಪಾದೂರು- ತೋಕೂರು ಪೈಪ್‌ಲೈನ್‌ ಕಾಮಗಾರಿಯನ್ನು ಖಾಸಗಿ ಸ್ಥಳದಲ್ಲಿ ಪರಿಹಾರ ವಿತರಿಸದೆ ನಡೆಸಲಾಗುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.‘ಕುರಾಲ್ ಪ್ರದೇಶದಲ್ಲಿ ಕೆಐಎಡಿಬಿ ನಾಗಪ್ಪ ಆಚಾರ್ಯ ಅವರ 5.5 ಸೆಂಟ್ಸ್ ಜಾಗವನ್ನು ಮಾತ್ರ ಗೊತ್ತುಪಡಿಸಿ ಪರಿ ಹಾರವನ್ನು ನೀಡಿತ್ತು. ಇದೀಗ ಕಂಪೆನಿ ಯವರು 45 ಸೆಂಟ್ಸ್ ಸ್ಥಳದಲ್ಲಿ ಯಾವು ದೇ ನೋಟಿಸ್ ನೀಡದೆ ಕಾಮಗಾರಿ ಮಾಡುತ್ತಿದ್ದಾರೆ. ರಾಮಕೃಷ್ಣ ತಂತ್ರಿಯ ವರ ಜಮೀನಿನಲ್ಲಿಯೂ ಅಕ್ರಮವಾಗಿ ಕಾಮಗಾರಿ ಮಾಡುತ್ತಿದ್ದಾರೆ. ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಬೇಕು ಇಲ್ಲವಾದಲ್ಲಿ ಈ ಪ್ರದೇಶಗಳಲ್ಲಿ ಪೈಪ್‌ಲೈನ್ ಕಾಮಗಾರಿಗೆ ಅವಕಾಶ ನೀಡುವುದಿಲ್ಲ’ ಎಂದು ಪಾದೂರು ಕಳತ್ತೂರು ಜನಜಾಗೃತಿ ಸಮಿತಿ ಮುಖ್ಯ ಸಲಹೆಗಾರ ಶಿವರಾಮ ಶೆಟ್ಟಿ ಎಚ್ಚರಿಕೆ ನೀಡಿದರು.

‘ಪಾದೂರಿನ ಕುರಾಲ್ ಹಾಗೂ ಕಳತ್ತೂರಿನ ರೈಸ್‌ಮಿಲ್ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಶನಿವಾರ ಮಾಧ್ಯಮದವರ ಮುಂದೆ ಜಿಲ್ಲಾಡಳಿತದ ಕ್ರಮಕ್ಕೆ ಅಸಮಾ ಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಕಂಪೆನಿಯು ಜನರಿಗೆ ಯಾವುದೇ ನೋ ಟಿಸ್ ನೀಡದೆ ಹೆಚ್ಚುವರಿ ಜಮೀನಿನಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸುತ್ತಿದೆ. ತಕ್ಷಣ ಅಕ್ರಮ ಕಾಮಗಾರಿಯನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ಅಕ್ಟೋಬರ್‌ನಲ್ಲಿ ರೈಸ್‌ಮಿಲ್ ಬಳಿ ಬಂಡೆ ಸ್ಫೋಟದಿಂದ 32 ಮನೆಗಳಿಗೆ ಹಾನಿಯಾಗಿದ್ದು, ಈವರೆಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಕೃಷಿ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ಯಿಂದ ಮಳೆ ನೀರು ಹರಿಯುವ ತೊಡುಗಳು ಮುಚ್ಚಿ ಹೋಗಿವೆ. ಮಳೆಗಾಲ ಆರಂಭಕ್ಕೆ ಮೊದಲು ಅದನ್ನು ಸರಿಪಡಿಸದಿದ್ದಲ್ಲಿ ಕೃತಕ ನೆರೆ ಉಂಟಾಗಿ ಜನ ಹಾಗೂ ಕೃಷಿ ಪ್ರದೇಶಕ್ಕೆ ಹಾನಿಯಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಅಕ್ರಮ ಕಾಮಗಾರಿ ಬಗ್ಗೆ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ನೀಡಿದ್ದಾರೆ. ಇತ್ತೀಚೆಗೆ ಕೆಐಎಡಿಬಿ ಸರ್ವೇ ಸಂದರ್ಭ ಗಡಿ ಗುರುತು ಮಾಡ ಲು ಗ್ರಾಮ ಲೆಕ್ಕಿಗರನ್ನು ಕಳುಹಿಸಿ ಕೊಡುವಂತೆ ತಹಶೀಲ್ದಾರ್ ಅವರಿಗೆ ವಿನಂತಿಸಿದರೂ ಅವರು ನಮ್ಮೊಂದಿಗೆ ಉದ್ಧಟತನದಿಂದ ವರ್ತಿಸಿದ್ದಾರೆ. ‘ನಮಗೆ ಸಾಕಷ್ಟು ಕೆಲಸಗಳಿವೆ. ನಿಮ್ಮ ಸಮಸ್ಯೆಯನ್ನು ನೀವೇ ನೋಡಿಕೊಳ್ಳಿ’ ಎಂದು ತಹಶೀಲ್ದಾರ್ ಹೇಳಿದ್ದಾರೆ’ ಎಂದು ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ರಾವ್ ಆರೋಪಿಸಿದರು. ಉಪಾಧ್ಯಕ್ಷೆ ಸಹನ ತಂತ್ರಿ, ಗ್ರಾಮಸ್ಥರಾದ ನಿತ್ಯಾನಂದ ಶೆಟ್ಟಿ, ಕೃಷ್ಣ ರಾವ್, ಶ್ರೀನಿವಾಸ ಐತಾಳ್ ದಿವಾಕರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.