ADVERTISEMENT

ಪೂರ್ಣಪ್ರಜ್ಞ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಉಪನ್ಯಾಸಕನ ಅಮಾನತಿಗೆ ಆಡಳಿತ ಮಂಡಳಿ ಷಡ್ಯಂತ್ರ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 7:11 IST
Last Updated 18 ಫೆಬ್ರುವರಿ 2017, 7:11 IST
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಕುಳಿತು ಪ್ರತಿಭಟನೆ ನಡೆಸಿದ ಉಪನ್ಯಾಸಕ ದುರ್ಗಾಪ್ರಸಾದ್. 								ಪ್ರಜಾವಾಣಿ ಚಿತ್ರ
ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಕುಳಿತು ಪ್ರತಿಭಟನೆ ನಡೆಸಿದ ಉಪನ್ಯಾಸಕ ದುರ್ಗಾಪ್ರಸಾದ್. ಪ್ರಜಾವಾಣಿ ಚಿತ್ರ   
ಉಡುಪಿ: ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ದುರ್ಗಾಪ್ರಸಾದ್‌ ಮಯ್ಯ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿ ಅವರನ್ನು ಅಮಾನತು ಮಾಡಲು ಅದಮಾರು ಶಿಕ್ಷಣ ಮಂಡಳಿ ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿ ಪೂರ್ಣ ಪ್ರಜ್ಞ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
 
ಕಾಲೇಜಿನ ಪ್ರವೇಶ ದ್ವಾರದ ಬಳಿ ಜಮಾಯಿಸಿದ ವಿದ್ಯಾರ್ಥಿಗಳು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ರಾವ್ ಅವರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ದುರ್ಗಾಪ್ರಸಾದ್ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು. ಈ ಪ್ರಕರಣದಲ್ಲಿ ಷಡ್ಯಂತ್ರ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ದುರ್ಗಾಪ್ರಸಾದ್ ಅವರ ಪರವಾಗಿ ಘೋಷಣೆ ಕೂಗುವ ಮೂಲಕ ಅವರನ್ನು ಬೆಂಬಲಿಸಿದರು.
 
‘ದುರ್ಗಾಪ್ರಸಾದ್‌ ಅವರು ಮೊದಲ ವರ್ಷದ ಬಿ.ಕಾಂ. ವಿದ್ಯಾರ್ಥಿಗಳಿಗೆ ಆಂತರಿಕ ಪರೀಕ್ಷೆ ಪ್ರಶ್ನೆಗಳನ್ನು ಮೊದಲೇ ನೀಡಿದ್ದರು. ಆ ಬಗ್ಗೆ ಸುಳಿವು ಸಿಕ್ಕ ನಂತರ ನಾವು ಪ್ರಶ್ನೆ ಪತ್ರಿಕೆ ಬದಲಾಯಿಸಿದ್ದೆವು. ಆ ನಂತರ ಅವರು ತಪ್ಪು ಉತ್ತರ ನೀಡಿರುವ ವಿದ್ಯಾರ್ಥಿಗಳಿಗೂ ಅಂಕ  ನೀಡಿದ್ದಾರೆ. ಅಂತಹ ಉತ್ತರ ಪತ್ರಿಕೆಗಳು ನಮ್ಮ ಬಳಿ ಇದ್ದು ಅವುಗಳನ್ನು ರಕ್ಷಿಸಿ ಇಡಲಾಗಿದೆ. ಮಾಡಿರುವ ತಪ್ಪಿಗೆ ಕ್ಷಮೆ ಯಾಚಿಸಿ ಎಂದು ಉಪನ್ಯಾಸಕರನ್ನು ಕೇಳಿದ್ದೇವೆ’ ಎಂದು ಅದಮಾರು ಶಿಕ್ಷಣ ಮಂಡಳಿ ಗೌರವ ಕಾರ್ಯದರ್ಶಿ ಡಾ. ಜಿ.ಎಸ್‌. ಚಂದ್ರಶೇಖರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
 
ಯಾವ ರೀತಿ ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ಕೆಲ ವಿದ್ಯಾರ್ಥಿಗಳಿಗೆ ದಾಖಲೆಗಳನ್ನು ತೋರಿಸಿದ್ದೇವೆ. ಆದರೂ ಅವರು ಒಪ್ಪುತ್ತಿಲ್ಲ. ಯಾವುದೇ ಕಾರಣಕ್ಕೂ ನೀತಿ ಬಿಟ್ಟು ಹೋಗಬಾರದು ಎಂಬುದು ಅದಮಾರು ಶಿಕ್ಷಣ ಮಂಡಳಿಯ ಮುಖ್ಯಸ್ಥರಾದ ವಿಶ್ವಪ್ರಿಯ ಸ್ವಾಮೀಜಿ ಅವರ ಆಶಯ. ಆದ್ದರಿಂದ ವಿದ್ಯಾರ್ಥಿಗಳಿಗೆ ಮೊದಲೇ ಪ್ರಶ್ನೆಗಳನ್ನು ಹೇಳಿದ್ದನ್ನು ಒಪ್ಪಲಾಗದು ಎಂದರು.
 
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಮಾತನಾಡಿ, ಮಕ್ಕಳನ್ನು ಸಂತೋಷ ಗೊಳಿಸುವ ಉದ್ದೇಶದಿಂದ ಅವರು ಮೊದಲೇ ಪ್ರಶ್ನೆಗಳನ್ನು ನೀಡಿದ್ದಾರೆ. ಈ ವಿಷಯದ ಬಗ್ಗೆ ಶಿಸ್ತು ಸಮಿತಿ ವಿಚಾರಣೆ ನಡೆಸಿ ವರದಿ ತಯಾರಿಸಲಿದೆ. ವರದಿ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಪೊಲೀಸರಿಗೆ ನೀಡಲಾಗುತ್ತದೆ ಎಂದು ಹೇಳಿದರು.
 
ವಿದ್ಯಾರ್ಥಿ ಚಂದನ್‌ ಮಾತನಾಡಿ, ದುರ್ಗಾಪ್ರಸಾದ್ ಅವರು ನಮಗೆ ಪ್ರಶ್ನೆಗಳನ್ನು ಮೊದಲೇ ಹೇಳಲಿಲ್ಲ. ಈ ಅಧ್ಯಾಯದಲ್ಲಿ ಮುಖ್ಯ ಪ್ರಶ್ನೆಗಳು ಯಾವವು ಎಂದು ನಾವೇ ಕೇಳಿದ್ದರಿಂದ ಅವರು ಪ್ರತಿಕ್ರಿಯಿಸಿದರು. ಇದರಲ್ಲಿ ಪ್ರಶ್ನೆಗಳನ್ನು ಮೊದಲೇ ಹೇಳಿದ ಪ್ರಶ್ನೆ ಬರುವುದಿಲ್ಲ. ಪರೀಕ್ಷೆಯಲ್ಲಿಯೂ ಬೇರೆ ಪ್ರಶ್ನೆಗಳಿದ್ದವು. ವಿನಾಕಾರಣ ಅವರ ಮೇಲೆ ಆರೋಪ ಮಾಡಲಾಗುತ್ತಿದೆ ಎಂದರು.
 
ಚಂದ್ರಶೇಖರ್ ಅವರು ಕಾಲೇಜಿ ನಿಂದ ಕಾರಿನಲ್ಲಿ ಹೊರಟಾಗ ವಿದ್ಯಾರ್ಥಿ ಗಳು ತಡೆದರು. ವಿಷಯವನ್ನು ಇತ್ಯರ್ಥ ಪಡಿಸಿ ಎಂದು ಅವರು ಪಟ್ಟುಹಿಡಿದರು.
ನೂರಾರು ವಿದ್ಯಾರ್ಥಿಗಳು ಪ್ರತಿಭಟ ನೆಗಿಳಿದ ಪರಿಣಾಮ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಎಸ್‌ಐ ಅನಂತ ಪದ್ಮನಾಭ ಅವರು ವಿದ್ಯಾರ್ಥಿಗಳು ಹಾಗೂ ದುರ್ಗಾಪ್ರಸಾದ್‌ ಅವರ ಮನವೊಲಿಸಿದರು.
 
‘ನಾನು ಆಣೆ ಮಾಡುವೆ’

ಸುಮಾರು ಎರಡು ವರ್ಷದಿಂದ ನಾನು ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲಸಕ್ಕೆ ಸೇರಿದ ಎರಡೇ ತಿಂಗಳಿನಲ್ಲಿ ನನಗೆ ಮಾನಸಿಕ ಕಿರುಕುಳ ನೀಡಲಾ ರಂಭಿಸಿದರು. ಯಾವುದೇ ಕಾರ್ಯಕ್ರಮಗಳಿಗೂ ನನ್ನನ್ನು ಆಹ್ವಾನಿಸುತ್ತಿರಲಿಲ್ಲ. ಈಗ ಅವರೇ ಎಲ್ಲವನ್ನೂ ಸೃಷ್ಟಿಸಿ ನನ್ನನ್ನು ಕಾಲೇಜಿನಿಂದ ಹೊರ ಹಾಕಲು ಪ್ರಯತ್ನಿಸುತ್ತಿದ್ದಾರೆ. ನನಗೆ ಬೆದರಿಕೆ  ಹಾಕಿದ್ದಾರೆ. ನಾನು ಯಾವುದೇ ತಪ್ಪು ಮಾಡದ ಕಾರಣ ಕ್ಷಮೆ ಕೇಳುವ ಪ್ರಮೇ ಯವೇ ಬರದು ಎಂದು ದುರ್ಗಾ ಪ್ರಸಾದ್ ಮಯ್ಯ ಹೇಳಿದರು.

ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕೃಷ್ಣ ದೇವರ ಮೇಲೆ ಆಣೆ ಮಾಡಲು ಸಿದ್ಧ. ನನ್ನ ಮೇಲೆ ಆರೋಪ ಮಾಡಿರುವ ವರು ಸಿದ್ಧರಿದ್ದಾರ ಎಂದು ಅವರು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.