ADVERTISEMENT

‘ಪತ್ರಿಕೋದ್ಯಮದಲ್ಲಿ ಪಾ.ವೆಂ. ಹೊಸ ಛಾಪು’

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2015, 8:32 IST
Last Updated 2 ಫೆಬ್ರುವರಿ 2015, 8:32 IST

ಉಡುಪಿ: ‘ಕೇವಲ ಪತ್ರಕರ್ತ ಮಾತ್ರ ಆಗಿರದ ಪಾ.ವೆಂ.ಕವಿಯೂ ಆಗಿದ್ದರು. ವಿಜ್ಞಾನ ಸೇರಿದಂತೆ ಸಾಹಿತ್ಯದ ಎಲ್ಲ ಮಗ್ಗುಲುಗಳನ್ನೂ ಬಲ್ಲ ಅವರು ಯಾವುದೇ ಕ್ಷೇತ್ರಕ್ಕೆ ಮೀಸಲಾಗಿರದೇ ತನ್ನದೇ ಆದ ಶೈಲಿಯಿಂದ ಪತ್ರಿಕೋದ್ಯ­ಮದಲ್ಲಿ ಹೊಸ ಛಾಪು ಮೂಡಿಸಿದ್ದರು’ ಎಂದು ಹುಬ್ಬಳ್ಳಿಯ ಉಪನ್ಯಾಸಕಿ ಸರ್ವಮಂಗಳಾ ಹೇಳಿದರು.

ಉಡುಪಿಯ ರಥಬೀದಿ ಗೆಳೆಯರು ಸಂಘಟನೆ ಮತ್ತು ಪಾವೆಂ ಆಚಾರ್ಯ ಟ್ರಸ್ಟ್ ಸಂಯುಕ್ತವಾಗಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನೀ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ  ‘ಪಾ. ವೆಂ. ಆಚಾರ್ಯ ಶತಮಾನದ ಸ್ಮರಣೆ’ ಕಾರ್ಯಕ್ರಮ­ದಲ್ಲಿ ಮಾತನಾಡಿದ ಅವರು, ವಿಡಂಬನೆ ಮೂಲಕ ಸಮಾಜದ ಡೊಂಕುಗಳನ್ನು ತಿದ್ದಿದರು.ಅವರ ಕವನಗಳಲ್ಲಿ ಕಾವ್ಯದ ಸತ್ವ ಕಡಿಮೆಯಾಗಿದ್ದರೂ ಲಹರಿಯ ತಾದಾತ್ಮ್ಯತೆ ಹೊಂದಿತ್ತು ಎಂದರು.

‘ಪತ್ರಕರ್ತನೊಬ್ಬ ಲೇಖಕನೊಂದಿಗೆ ಯಾವ ರೀತಿ ಸಂಬಂಧವಿರಿಸಿ­ಕೊಳ್ಳ­ಬೇಕು. ಲೇಖಕನ ಸಂಬಂಧವಿಲ್ಲದೇ ಯಾವ ಪತ್ರಿಕೆಯೂ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿ­ಕೊಟ್ಟಿದ್ದ ಪಾ. ವೆಂ. ಕಿರಿಯ ಲೇಖಕ­ರಿಗೂ ಮಾರ್ಗದರ್ಶಕರಾಗಿ­ದ್ದರು’ ಎಂದು ಹಿರಿಯ ಕಲಾ ವಿಮರ್ಶಕ ಎ.ಈಶ್ವರಯ್ಯ ಹೇಳಿದರು.

ಅಂಬಲಪಾಡಿ ಜನಾರ್ದನ ಮಹಾ­ಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್‌,  ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಪಾ.ವೆಂ. ಶತಮಾ­ನೋ­ತ್ಸವ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಾಯ ಬೆಂಗಳೂರು ಸೇರಿದಂತೆ ಅವರ ಅಭಿಮಾನಿಗಳು ಹಾಗೂ ಸಾಹಿತಿಗಳು ಉಪಸ್ಥಿತ­ರಿದ್ದರು.

ಟ್ರಸ್ಟ್ ಅಧ್ಯಕ್ಷ ಪ್ರೊ. ರಾಧಾಕೃಷ್ಣ ಆಚಾರ್ಯ ಸ್ವಾಗತಿಸಿದರು. ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ರಾವ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.