ಕುಮಟಾ : ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಮಂಗಳವಾರ ಎರಡು ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಗಮನ ಸಳೆದರು.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಗ್ರಾಮ ಒಕ್ಕಲ ಸಮಾಜದ ಮುಖಂಡ ಹೊನ್ನಾವರದ ಕೃಷ್ಣೇಗೌಡ ನಾಮಪತ್ರ ಸಲ್ಲಿಸಿದರು. ಬಿ.ಜೆ.ಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರ ವಿರುದ್ಧ ಉದ್ಯಮಿ ಯಶೋಧರ ನಾಯ್ಕ ಹಾಗೂ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಸೂರಜ ನಾಯ್ಕ ಸೋನಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನಾಮಪತ್ರ ಸಲ್ಲಿಸಿದ ಬಂಡಾಯ ಅಭ್ಯರ್ಥಿ ಕೃಷ್ಣೇ ಗೌಡ ಅವರೊಂದಿಗೆ ಹೊನ್ನಾವರದ ರವಿಶೆಟ್ಟಿ, ಕಳೆದ ಸಲ ಕುಮಟಾದ ಮೂರೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್ ಬೆಂಬಲಿತ ಮಂಜುನಾಥ ಗೌಡ ಪ್ರಮುಖವಾಗಿ ಗುರುತಿಸಿಕೊಂಡಿದ್ದರು.
ಬಿ.ಜೆ.ಪಿ ಅಭ್ಯರ್ಥಿ ದಿನಕರ ಶೆಟ್ಟಿ ಅವರೊಂದಿಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮುಂತಾದ ನಾಯಕರು ನಾಮಪತ್ರ ಸಲ್ಲಿಸಲು ಆಗಮಿಸಿದ್ದರೆ, ಸ್ವಲ್ಪ ಹೊತ್ತಿನಲ್ಲಿಯೇ ಇನ್ನೊಂದು ರಸ್ತೆಯಿಂದ ಸೂರಜ ನಾಯ್ಕ ಸೋನಿ ಹಾಗೂ ಅದಕ್ಕೂ ಮೊದಲು ಯಶೋಧರ ನಾಯ್ಕ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯದ ಕಹಳೆ ಊದಿದರು.
ಜಯಂತ್ ನಾಯ್ಕ ಕಣಕ್ಕೆ
ಭಟ್ಕಳ: ಇದೇ ಮೊದಲ ಬಾರಿಗೆ ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಶಿವಸೇನೆ ಸ್ಪರ್ಧಿಸುತ್ತಿದ್ದು, ಪಕ್ಷದ ಅಭ್ಯರ್ಥಿಯಾಗಿ ಶ್ರೀರಾಮಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮುರ್ಡೇಶ್ವರದ ಜಯಂತ್ ನಾಯ್ಕ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಎಂಪವರ್ ಪಾರ್ಟಿಯಿಂದ ಅಬ್ದುಲ್ ಗಫೂರ್ ಸಾಬ್, ಪಕ್ಷೇತರ ಅಭ್ಯರ್ಥಿಗಳಾಗಿ ಪ್ರಕಾಶ ಪಿಂಟೋ ಹಾಗೂ ಅಬ್ದುಲ್ ರಹಿಮಾನ್ ಎಂಬುವರು ನಾಮಪತ್ರವನ್ನು ಸಲ್ಲಿಸಿದ್ದು, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.
ವೀಕ್ಷಕರ ಭೇಟಿಗೆ ಅವಕಾಶ
ಯಲ್ಲಾಪುರ: ರಾಜ್ಯ ವಿಧಾನಸಭಾ ಚುನಾವಣಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡಿರುವ ಸುನೀಲಕುಮಾರ ಜೈನ್ ಅವರನ್ನು ಸಾರ್ವಜನಿಕರು ಪಟ್ಟಣದ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಏ.23 ರಿಂದ ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚುನಾವಣೆಗೆ ಸಂಬಂಧಿಸಿ ಯಾವುದೇ ವಿಷಯದ ಕುರಿತು ಸಾರ್ವಜನಿಕರು ಬೆ.9 ರಿಂದ 10 ರ ವರೆಗೆ ನೇರವಾಗಿ ಭೇಟಿಯಾಗಿ, ಅಹವಾಲು ಸಲ್ಲಿಸಬಹುದು. ಅಥವಾ ಮೊ: 8277031803 ಸಂಪರ್ಕಿಸಬಹುದು ಎಂದು ಕ್ಷೇತ್ರದ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.