ADVERTISEMENT

ಕುಡಿತಕ್ಕೆ ಕಡಿವಾಣ, ಮದ್ಯಪ್ರಿಯರು ಹೈರಾಣ!

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 9:19 IST
Last Updated 16 ಏಪ್ರಿಲ್ 2018, 9:19 IST

ಮುಂಡಗೋಡ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಂಸಾಹಾರ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದು, ಮದ್ಯ ಪ್ರಿಯರು ಹೊರವಲಯದ ತೋಟ, ಬಯಲು ಪ್ರದೇಶ, ಅರಣ್ಯ ಪ್ರದೇಶದತ್ತ ಮುಖ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಕೆಲದಿನಗಳಿಂದ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡಬಾರದು ಎಂದು ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರಿಂದ ಬಹುತೇಕ ಮಾಂಸಾಹಾರ ಹೋಟೆಲ್‌ಗಳು ಗಿರಾಕಿಗಳಿಲ್ಲದೇ ಬಿಕೋ ಎನ್ನುತ್ತಿವೆ.

ಮಾಂಸಾಹಾರ ಹೋಟೆಲ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಊಟದ ಜತೆಗೆ ಮದ್ಯ ಕೇಳುತ್ತಾರೆ. ಆದರೆ ‘ಡ್ರಿಂಕ್ಸ್‌ ನಾಟ್ ಅಲೋವ್ಡ್’ ಎಂಬ ಫಲಕಗಳು ಗ್ರಾಹಕರಿಗೆ ಕಿರಿಕಿರಿ ತಂದೊಡ್ಡಿವೆ. ಬಾರ್‌ಗಳಲ್ಲಿ ಮದ್ಯ ಖರೀದಿಸುವ ಜನರು ಬಯಲು ಪ್ರದೇಶಕ್ಕೆ ತೆರಳುತ್ತಿರುವುದನ್ನು ಕಾಣಬಹುದಾಗಿದೆ. ಪಟ್ಟಣದ ಎಪಿಎಂಸಿ ಹಿಂಬದಿಯ ಆವರಣ, ಕೆಂಪಟ್ಟಿ ಏರಿ ಸನಿಹದ ಅರಣ್ಯ, ರೋಟರಿ ಹಿಂಬದಿಯ ಮೈದಾನ, ಊರಾಚೆಗಿನ ಹೊಲಗದ್ದೆಗಳು ಸಂಜೆಯ ವೇಳೆಗೆ ಮದ್ಯಪ್ರಿಯರ ತಾಣಗಳಾಗುತ್ತಿವೆ. ಕತ್ತಲಾಗುತ್ತಿದ್ದಂತೆ ಮದ್ಯ ಸೇವನೆ ಮಾಡಲು ಜಾಗ ಹುಡುಕುವುದು ದೊಡ್ಡ ಕೆಲಸವಾಗಿದೆ ಎನ್ನುತ್ತಾರೆ ಮದ್ಯಪ್ರಿಯರು. ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಪೊಲೀಸರು ಎಚ್ಚರಿಕೆ ನೀಡಿದ್ದು, ಮದ್ಯ ಮಾರಾಟ ಮಾಡುವುದು, ಹೋಟೆಲ್‌ನಲ್ಲಿ ಮದ್ಯ ಸೇವಿಸುವುದು ಕಂಡುಬಂದರೆ ಪ್ರಕರಣ ದಾಖಲಿಸಿ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಯಾವಾಗ ಚುನಾವಣೆ ಮುಗಿಯುತ್ತದೆ ಎನ್ನುವಂತಾಗಿದೆ ಎನ್ನುತ್ತಾರೆ ಹೋಟೆಲ್‌ ಮಾಲೀಕ ನಾಗರಾಜ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.