ADVERTISEMENT

ದೇಶದ್ರೋಹಿ ಸಂಘಟನೆ ನಿಷೇಧಿಸಿ

ಬಜರಂಗ ದಳ, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ, ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:41 IST
Last Updated 13 ಜುಲೈ 2017, 11:41 IST

ಶಿರಸಿ: ಮುಸ್ಲಿಂ ಜಿಹಾದಿ ಸಂಘಟನೆ­ಗಳಾದ ಪಿಎಫ್‌ಐ, ಎಸ್‌ಡಿಪಿಐ, ಕೆಎಫ್‌ಡಿ ಅನ್ನು ದೇಶದ್ರೋಹಿ ಸಂಘ­ಟನೆ­ಗಳೆಂದು ಪರಿಗಣಿಸಿ ಇವುಗಳನ್ನು ನಿಷೇಧಿಸಬೇಕು. ದೇಶದಲ್ಲಿ ಹಿಂದೂ­ಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾ­ಯಿಸಿ ಬಜರಂಗ ದಳ, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಬಜರಂಗ ದಳದ ಜಿಲ್ಲಾ ಘಟಕದ ಸಂಯೋಜಕ ವಿಠ್ಠಲ ಪೈ ಮಾತನಾಡಿ ‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಕಳೆದ ನಾಲ್ಕು ವರ್ಷಗಳಿಂದ ಹಿಂದೂಗಳ ಜೀವನ ಕಷ್ಟಕರವಾಗಿದೆ. ಕೋಮು ಗಲಭೆ ಸೃಷ್ಟಿಸಿ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಿದೆ. ಹಿಂದೂಗಳ ಸಹನಾಶೀಲರು. ಎಲ್ಲವನ್ನೂ ಸಹಿಸಿಕೊಂಡು ಸಾಕಾಗಿ ಒಮ್ಮೆ ಸಿಡಿದೆದ್ದರೆ ಹೊತ್ತಿಕೊಳ್ಳುವ ಬೆಂಕಿ ನಂದಿಸಲು ಸಾಧ್ಯವಿಲ್ಲ ಎಂಬುದನ್ನು ಮುಖ್ಯಮಂತ್ರಿ ಅರಿತುಕೊಳ್ಳಬೇಕು’ ಎಂದರು.

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಅವರಿಗೆ ಹಿಂದೂ ಜಾಗರಣಾ ವೇದಿಕೆಯ ತಾಲ್ಲೂಕು ಸಂಯೋಜಕ ಗೋಪಾಲ ದೇವಾಡಿಗ ಹಾಗೂ ವಿಠ್ಠಲ ಪೈ ಮನವಿ ಸಲ್ಲಿಸಿದರು. ‘ಶರತ್ ಮಡಿವಾಳ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಬಹುಸಂಖ್ಯಾತ ಹಿಂದೂ­ಗಳು ಭಯದ ವಾತಾವರಣದಲ್ಲಿ ಬದು­ಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ­ದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಘ ಪರಿವಾರದ 22ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆ ನಡೆದಿದೆ.

ADVERTISEMENT

ಸರಿಯಾದ  ತನಿಖೆ ನಡೆಸದೇ ಅಪರಾಧಿಗಳನ್ನು ರಕ್ಷಿಸುವ ಹಾಗೂ ಮುಸ್ಲಿಮರನ್ನು ಓಲೈಸುವ ಸರ್ಕಾರದ ನೀತಿ ಖಂಡನಿಯ. ಈ ಎಲ್ಲ ಪ್ರಕರಣಗಳ ತನಿಖೆಯನ್ನು ಸಿ.ಬಿ.ಐ.ಗೆ ವಹಿಸಬೇಕು. ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಯು.ಟಿ. ಖಾದರ್ ಮತ್ತು ರಮಾನಾಥ್ ರೈ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು. ಇಂತಹ ಪ್ರಕರಣಗಳು ನಡೆಯದಂತೆ ಕಾನೂನು ಬಿಗಿಗೊಳಿಸಬೇಕು.

‘ಮಂಗಳೂರು ಮುಸ್ಲಿಂ’ ಫೇಸ್‌ಬುಕ್ ಪುಟದಿಂದ ಹಿಂದುಗಳ ಮನಸ್ಸಿಗೆ ನೋವಾಗಿದೆ. ಕೋಮು ದ್ವೇಷ ಹರಡು­ತ್ತಿರುವ ಈ ಪುಟದ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅಮರನಾಥ ಯಾತ್ರಿಕರಿಗೆ ರಕ್ಷಣೆ ನೀಡಬೇಕು’ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಪ್ರಮುಖರಾದ ಸುರೇಶ್ಚಂದ್ರ ಹೆಗಡೆ, ರವೀಶ ಹೆಗಡೆ, ವೀಣಾ ಭಟ್ಟ, ಪವಿತ್ರಾ ಹೊಸೂರು, ಸುರೇಶ ಶೆಟ್ಟಿ, ಮಹಾಂತೇಶ ಹಾದಿಮನಿ, ವಿಶಾಲ ಮರಾಠೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.