ADVERTISEMENT

ಮಳೆಗಾಲ: ಅನಾಹುತ ಆಗದಂತೆ ಎಚ್ಚರ ವಹಿಸಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:20 IST
Last Updated 23 ಮೇ 2017, 9:20 IST

ಕಾರವಾರ: ‘ಚತುಷ್ಪಥ ಕಾಮಗಾರಿ ಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿದು ಹೋಗದೆ ಕೃತಕ ನೆರೆ ಇತ್ಯಾದಿ ತೊಂದರೆಗಳು ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಸ್.ನಕುಲ್ ಐಆರ್‌ಬಿ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐಆರ್‌ಬಿ ಸಂಸ್ಥೆ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಳೆಗಾಲ ಪೂರ್ವದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.

‘ರಸ್ತೆಯ ಎರಡು ಬದಿಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಚರಂಡಿ ವ್ಯವಸ್ಥೆಯನ್ನು ಮಾಡಬೇಕು. ರಸ್ತೆಗೆ ಅಡ್ಡವಾಗಿ ಮೋರಿಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಬೇಕು. ಕಳೆದ ಬಾರಿ ಗುಡ್ಡ ಕುಸಿತ ಉಂಟಾದ ಸ್ಥಳಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ’ ಎಂದು ತಿಳಿಸಿದರು.

ADVERTISEMENT

‘ಕುಮಟಾ ವಿಭಾಗದಲ್ಲಿ 16 ಕಡೆಗಳಲ್ಲಿ ಮಣ್ಣು ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಇದೇ ರೀತಿ ಎಲ್ಲಾ ವಿಭಾಗಗಳಲ್ಲಿ ಅಂತಹ ಸ್ಥಳಗಳನ್ನು ಗುರುತಿಸಿ ಪಟ್ಟಿಯನ್ನು ತಕ್ಷಣ ಒದಗಿಸ ಬೇಕು. ಧಾರೇಶ್ವರ ಮತ್ತು ಕುಮಟಾ ಭಾಗದಲ್ಲಿ ಮೋರಿ ನಿರ್ಮಾಣ ಕಾರ್ಯ ವನ್ನು ತ್ವರಿತಗೊಳಿಸಬೇಕು.

ಮಳೆಗಾಲದ ಒಳಗಾಗಿ ಕಾರವಾರದ ಸದಾಶಿವಗಡ ಗುಡ್ಡವನ್ನು ತೆರವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಹಸ್ತಾಂತರಿಸಲಾಗಿರುವ ಸ್ಥಳಗಳಲ್ಲಿ ಸಹ ಇನ್ನೂ ಕಾಮಗಾರಿಯನ್ನು ಪ್ರಾರಂಭಿಸಿ ರುವುದಿಲ್ಲ. ಅಂಥಹ ಸ್ಥಳಗಳಲ್ಲಿ ಕಾಮಗಾರಿ ಪ್ರಾರಂಭಿಸಲು ಅಡ್ಡಿಯೇನಿದೆ’ ಎಂದು ಜಿಲ್ಲಾಧಿಕಾರಿ  ಪ್ರಶ್ನಿಸಿದರು.

ಕೊಳವೆಬಾವಿ, ಪೈಪ್‌ಲೈನ್‌ ಅಳವಡಿಸಿ: ‘ಚತುಷ್ಪಥ ಕಾಮಗಾರಿಯಿಂದಾಗಿ ಹಾಳಾಗಿರುವ ಕೊಳವೆಬಾವಿ ಹಾಗೂ ನೀರಿನ ಪೈಪ್‌ಲೈನ್‌ಗಳನ್ನು ಐಆರ್‌ಬಿ ವತಿಯಿಂದ ಪುನರ್ ನಿರ್ಮಿಸಬೇಕು. ಎಷ್ಟು ಕೊಳವೆಬಾವಿ ಕಾಮಗಾರಿಯಿಂದ ತೆರವಾಗಿವೆ ಎಂಬ ಕುರಿತು ಮಾಹಿತಿ ಯನ್ನು ಒದಗಿಸಿ’ ಎಂದು ತಹಶೀಲ್ದಾರ್‌ ಗಳಿಗೆ ಸೂಚನೆ ನೀಡಿದರು.

‘ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಗಳು ಅಧಿಕವಿದ್ದು, ಈ ನಿಮಿತ್ತ ಕಾಮಗಾರಿ ನಡೆಯುವ ಸ್ಥಳಗಳಲ್ಲಿ, ತಿರುವುಗಳಲ್ಲಿ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ತಾತ್ಕಾಲಿಕ ಬ್ಯಾರಿಕೇಡ್‌ ಗಳನ್ನು ಸಮರ್ಪಕವಾಗಿ ಅಳವಡಿಸಿ ಅದಕ್ಕೆ ರಿಫ್ಲೆಕ್ಟರ್‌ಗಳನ್ನು ಅಳವಡಿಸ ಬೇಕು.

ಮಳೆಯಿಂದ ಹಾನಿ ಸಂಭವಿಸಿ ದರೆ ತಕ್ಷಣ ಕಾರ್ಯಪ್ರವೃತ್ತವಾಗಲು ಐಆರ್‌ಬಿ ಅಧಿಕಾರಿ, ಸಿಬ್ಬಂದಿ ಯಂತ್ರೋಪಕರಣಗಳೊಂದಿಗೆ ಸದಾ ಸನ್ನದ್ಧರಾಗಿರಬೇಕು. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಳೆಗಾಲದಲ್ಲಿ ಯಾವುದೇ ಅವಘಡ ಗಳು ಸಂಭವಿಸುವುದನ್ನು ತಪ್ಪಿಸ ಬಹುದಾಗಿದೆ’ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿ ಕಾರಿ ಕೆ.ಜಿ.ದೇವರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.