ಕಾರವಾರ: ನಗರದಲ್ಲಿ ಭಾನುವಾರ ಬೆಳಗಿನ ಜಾವ ಗುಡುಗು, ರಭಸದ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಕಾರವಾರದಲ್ಲಿ ಬೆಳಿಗ್ಗೆ 5.30ರ ಸುಮಾರಿಗೆ ಆರಂಭವಾದ ಮಳೆ ಬೆಳಿಗ್ಗೆ 8ರವರೆಗೂ ಮುಂದುವರಿಯಿತು. ಒಂದು ತಿಂಗಳಿನಿಂದ ಸುಡುಬಿಸಿಲಿನಲ್ಲಿ ಕಂಗೆಟ್ಟಿದ್ದ ನಾಗರಿಕರು ಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸಂತೆಯ ದಿನವಾಗಿದ್ದು, ಮಳೆಯಿಂದಾಗಿ ವ್ಯಾಪಾರಿಗಳು ರಸ್ತೆ ಬದಿ ತರಕಾರಿ, ಮೀನು ಇಡಲಾಗದೇ ಪರದಾಡಿದರು. ಹಾವೇರಿ, ರಾಣೆಬೆನ್ನೂರು, ಧಾರವಾಡ, ಬೆಳಗಾವಿ ಭಾಗದಿಂದ ಶನಿವಾರ ರಾತ್ರಿಯೇ ನಗರಕ್ಕೆ ಬಂದಿದ್ದ ವ್ಯಾಪಾರಿಗಳು ಕಷ್ಟ ಅನುಭವಿಸಿದರು. ಕೊತ್ತಂಬರಿ, ಉದ್ದಿನಬೇಳೆ, ಶೇಂಗಾ ಮುಂತಾದ ಬೇಳೆಕಾಳು
ಗಳು, ಒಣಮೆಣಸು ಮಳೆಯಲ್ಲಿ ನೆನೆಯಿತು. ಬೆಳಿಗ್ಗೆ 10ರ ನಂತರ ನೆಲ ಒಣಗಿದ ಮೇಲೆ ವ್ಯಾಪಾರ, ವಹಿವಾಟು ಚುರುಕಾಯಿತು. ಗ್ರಾಹಕರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಖರೀದಿ ಮಾಡಿದರು.
ಮಾವಿನ ದರ ಇಳಿಕೆ: ಜಿಲ್ಲೆಯ ಪ್ರಸಿದ್ಧ ಕರಿ ಇಶಾಡ್ ತಳಿಯ ಮಾವಿನಹಣ್ಣನ್ನು ಪ್ರತಿ ಡಜನ್ಗೆ ₹ 200ಕ್ಕಿಂತ ಹೆಚ್ಚಿನ ದರಕ್ಕೆ ಎರಡು ದಿನಗಳ ಹಿಂದಿನವರೆಗೂ ಮಾರಾಟ ಮಾಡಲಾಗುತ್ತಿತ್ತು. ಆದರೆ, ಮಳೆಯಾಗಿರುವ ಕಾರಣ ₹ 110ಕ್ಕೆ ಕುಸಿದಿದೆ. ಹಣ್ಣುಗಳನ್ನು ಸಂಗ್ರಹಿಸಿ ಮಾಡಿಟ್ಟುಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರಿಗಳು ಕಡಿಮೆ ದರಕ್ಕೆ ಮಾರುತ್ತಿದ್ದಾರೆ. ಆದರೆ, ಇದರಿಂದ ಗ್ರಾಹಕರು ಖುಷಿಯಾಗಿದ್ದಾರೆ.
ರಸ್ತೆಗೆ ಬಿದ್ದ ಟೊಂಗೆಗಳು
ಶಿರಸಿ ನಗರದಲ್ಲೂ ಭಾನುವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ. ಕುಮಟಾ ರಸ್ತೆಯ ದೇವಿಮನೆ ಘಟ್ಟದ ವಿವಿಧೆಡೆ ಮರದ ಟೊಂಗೆಗಳು ಮುರಿದು ಹೆದ್ದಾರಿಯ ಮೇಲೆ ಬಿದ್ದಿದ್ದವು. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.