ವಿಜಯಪುರ: ನಗರದ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದ ಕಳ್ಳರು, ₹14 ಲಕ್ಷ ನಗದು ಇದ್ದ ಪೆಟ್ಟಿಗೆಯೊಂದಿಗೆ ಶನಿವಾರ ಪರಾರಿಯಾಗಿದ್ದಾರೆ.
ಬ್ಯಾಂಕಿನ ಮುಖ್ಯ ಕಚೇರಿಯಿಂದ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡಲು, ಮೂರು ಟ್ರಂಕ್ಗಳಲ್ಲಿ ಹಣ ಕೊಂಡೊಯ್ಯಲು ಬ್ಯಾಂಕ್ ಸಿಬ್ಬಂದಿ ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಘಟನೆ ವಿವರ: ಶನಿವಾರ ಬೆಳಿಗ್ಗೆ 11.30ಕ್ಕೆ, ಹಣವಿದ್ದ ಟ್ರಂಕ್ಗಳನ್ನು ಬ್ಯಾಂಕ್ ಸಿಬ್ಬಂದಿ ವಿಶೇಷ ವಾಹನದಲ್ಲಿ ಕೊಂಡೊಯ್ಯಲು ಸಜ್ಜಾಗಿದ್ದರು. ಭದ್ರತಾ ಸಿಬ್ಬಂದಿಯೂ ಕಾವಲಿಗಿದ್ದರು. ಈ ಸಂದರ್ಭ ವಾಹನದ ಬಳಿ ಬಂದ ಚಾಲಾಕಿ ಕಳ್ಳನೊಬ್ಬ ಕೆಲ ನೋಟುಗಳನ್ನು ಕೆಳಗೆ ಚೆಲ್ಲಿ ಸಿಬ್ಬಂದಿಯ ಗಮನವನ್ನು ಅತ್ತ ಸೆಳೆದಿದ್ದಾನೆ. ಭದ್ರತಾ ಕಾವಲುಗಾರ ಕೆಳಗೆ ಬಿದ್ದಿದ್ದ ನೋಟುಗಳನ್ನು ಆಯ್ದುಕೊಳ್ಳಲು ಮುಂದಾಗುತ್ತಿದ್ದಂತೆಯೇ, ವಾಹನದೊಳಗಿಟ್ಟಿದ್ದ ಒಂದು ಟ್ರಂಕ್ನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ. ಈ ದೃಶ್ಯ, ಬ್ಯಾಂಕ್ನಲ್ಲಿ ಅಳವಡಿಸಲಾಗಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಗಾಂಧಿಚೌಕ್ ಪೊಲೀಸರು ಘಟನೆಯ ಮಾಹಿತಿ ನೀಡಿದರು.
ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪಕುಮಾರ್ ಆರ್ ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.