ನಿಡಗುಂದಿ: ‘ತಾಯಿ ಬಾಯಿಯಾಗ ಜನಪದ ಇದ್ರ ಮಕ್ಕಳತನ ಜನಪದ ಬರತೈತಿ. ಅದಕ್ ನಮ್ಮೆಲ್ಲಾ ತಾಯಂದ್ರು ಮಕ್ಕಳಿಗೆ ಜನಪದ ಹಾಡ ಕಲಸ್ರಿ. ಟಿ.ವಿ ನೋಡುವುದು ಕಡಿಮಿ ಮಾಡಿಸ್ರೀ... ಸಂಜಿ ಮುಂದ ಮಕ್ಕಳ್ ಜೊತಿ ಕೂಡಿ ಹಾಡ ಹೇಳ್ರಿ, ಕತಿ ಹೇಳ್ರಿ, ಆಟಾ ಆಡಿಸ್ರಿ ಅಂದಾಗ ಮಾತ್ರ ನಮ್ಮ ಜಾನಪದ ಉಳಿತೈತಿ ಇಲ್ಲಾಂದ್ರ ಮುಂದಿನೋರಿಗೆ ಈ ಜನಪದ ಕಣ್ಮರೆ ಆಗತೈತಿ’ ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು.
ಸಮೀಪದ ಕಲಗುರ್ಕಿಯಲ್ಲಿ ನಡೆದ ಗಿರಿಜನ ಉತ್ಸವದಲ್ಲಿ ಅವರು ಮಾತನಾಡಿದರು. ಬಸವನಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ, ಕಲಗುರ್ಕಿಯ ತಾರಾನಾಥ ಮಹಾಪುರುಷರು, ಮಸೂತಿಯ ಪ್ರಭುಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಾಚಯ್ಯ ಸ್ವಾಮಿ ಹಿರೇಮಠ, ಡಾ.ವಿಶ್ವನಾಥ ಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ತಾಲ್ಲೂಕು ಪಂಚಾಯ್ತ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಾಂತಾಬಾಯಿ ಕರಿಗಾರ, ಇದ್ದರು.
ಕಲಾ ಪ್ರದರ್ಶನ: ಕಾವ್ಯ ಸಂಗೀತ ಗುರುಕುಲ ಬೆಂಗಳೂರು ಅವರ ಸಮೂಹ ಸಂಗೀತ, ಕಲಗುರ್ಕಿಯ ಡೊಳ್ಳಿನ ಸಂಘದ ಡೊಳ್ಳು ಪದ, ಅಕ್ಕಮಹಾದೇವಿ ಮಹಿಳಾ ತಂಡದ ಸಂಪ್ರದಾಯ ಪದಗಳು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ರಾಧಾಕೃಷ್ಣ ಹಾಗೂ ದೇವಿ ನೃತ್ಯರೂಪಕ, ಸಚಿನ ದೇಸಾಯಿ ತಂಡದ ಲಾವಣಿ ಹಾಡುಗಳು, ಅಮ್ಚೆ ಮೂಳ್ ಸಿದ್ದಿ ಕಲಾ ತಂಡ ಉತ್ತರ ಕನ್ನಡದ ಡಮಾಮಿ ನೃತ್ಯ, ಸೂತ್ರದ ಗೊಂಬೆಯಾಟ ಹೊಂಗಿರಣ ಗೊಂಬೆಯಾಟ ಕಲಾ ತಂಡ ಹಳಿಯಾಳ, ಅವ್ವಪ್ಪ ಅರಳಿಚಂಡಿಯ ಶ್ರೀಕೃಷ್ಣ ಪಾರಿಜಾತ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಸಿದ್ದು ಬಿರಾದಾರ ಸ್ವಾಗತಿಸಿದರು. ಕೆ.ಎನ್.ಅಲ್ಲಾಪುರ ಮತ್ತು ಅಕ್ಷಯ ನಾಗ್ರೇಶಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.