ADVERTISEMENT

‘ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ’

ಮಟಕಿ ಪ್ರೌಢಶಾಲೆಯಲ್ಲಿ ವಾರ್ಷಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 8:28 IST
Last Updated 17 ಮಾರ್ಚ್ 2018, 8:28 IST

ಆಳಂದ: ‘ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಹೆಚ್ಚು ಆತಂಕ, ಒತ್ತಡಕ್ಕೆ ಒಳಗಾಗಬಾರದು. ಮಾರ್ಚ್‌ 23ರಿಂದ ಆರಂಭಗೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಮರ್ಪಕ ಸಿದ್ಧತೆ ಮಾಡಿಕೊಂಡು ಆತ್ಮವಿಶ್ವಾಸದಿಂದ ಎದುರಿಸಬೇಕು’ ಎಂದು ಮುಖ್ಯಗುರು ಶಿವಮೂರ್ತಿ ಎಸ್.ತಡಕಲ್‌ ಹೇಳಿದರು.

ತಾಲ್ಲೂಕಿನ ಮಟಕಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶುಕ್ರವಾರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಜ್ಞಾನ ಸಂಗ್ರಹ, ವೈಚಾರಿಕತೆ ಹಸಿವು ಹೆಚ್ಚಬೇಕು. ಇಂತಹ ಶಿಕ್ಷಣದಿಂದ ವ್ಯಕ್ತಿತ್ವ ರೂಪುಗೊಳ್ಳುವುದಲ್ಲದೆ ಮಕ್ಕಳು ರಾಷ್ಟ್ರದ ಸಂಪನ್ಮೂಲವಾಗಿ ಪರಿವರ್ತೆನೆ ಹೊಂದುವರು’ ಎಂದರು.

ADVERTISEMENT

ಶಿಕ್ಷಕರಾದ ಬಸವರಾಜ, ಎಸ್.ಬಿ.ಚನ್ನಮ್ಮ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಏಕಾಗ್ರತೆ, ಸತತ ಅಭ್ಯಾಸದಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಿದೆ. ಉತ್ತಮ ಸಾಧನೆಯಿಂದ ಶಾಲೆ, ಶಿಕ್ಷಕರು ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು’ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಸೋಹಲ್, ನಿತಿನ್‌ಕುಮಾರ, ನಿರ್ಮಿತಾ ಪಾಂಡ್ರೆ, ಪ್ರೇಮಾ ಕಾಂಬಳೆ, ಶಿವಕುಮಾರ ಬಿರಾದಾರ, ಸಾಕ್ಷಿ ಹಣಮಂತ, ಜಗದೀಶ ಬಡಿಗೇರ, ಭಾಗೇಶ, ಭಾಗ್ಯಶ್ರೀ, ಅಣ್ಣಪ್ಪ ನಾಗೂರೆ, ಅಲ್ತಾಫ್ ಅಲ್ಲಾಬಕ್ಸಾ ಮಾತನಾಡಿ ಶಾಲೆಯಲ್ಲಿ ಕಳೆದ ನೆನಪುಗಳನ್ನು ಹಂಚಿಕೊಂಡರು.

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಿಕ್ಷಕರು ಹಾಗೂ ಬಿಸಿಯೂಟದ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಶಿಕ್ಷಕ ಕಾಳಪ್ಪ ಕಲಕೇರಿ, ಸಂಗೀತಾ ಚಿಂಚೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.