ಹುಣಸಗಿ: ಸಮೀಪದ ವಜ್ಜಲ ಗ್ರಾಮದಲ್ಲಿ ಮಾ.22ರಂದು ಪವಾಡ ಪುರುಷ ತಿಮ್ಮಪ್ಪಯ್ಯ ಶರಣರ ಜಾತ್ರೆ ನಡೆಯಲಿದೆ.
ಸಂಜೆ ರಥೋತ್ಸವ ಜರುಗಲಿದ್ದು, ಜಾತ್ರೆ ಅಂಗವಾಗಿ ನಾಡಿನ ಐವರು ಸಾಧಕರನ್ನು ರಥೋತ್ಸವ ನಂತರ ನಡೆಯುವ ಕಾರ್ಯಕ್ರಮದಲ್ಲಿ ‘ಕರು ನಾಡು ಕಾಯಕ ಯೋಗಿ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ ಎಂದು ಡಾ.ಎಸ್.ಪಿ.ದಯಾನಂದ ತಿಳಿಸಿದರು.
ಹುಣಸಗಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷದಿಂದ ಮಾತೋಶ್ರೀ ಸುಶೀಲಮ್ಮ ಪಟ್ಟಣಶೆಟ್ಟಿ ಸ್ಮಾರಕ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ತಲಾ ₹10 ಸಾವಿರ ನಗದು ಮತ್ತು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ’ ಎಂದರು.
‘ಈ ಬಾರಿ ಹಿರಿಯ ಸಂಶೋಧಕ ಸೀತಾರಾಮರಾವ ಜಹಗಿರದಾರ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಜಾಲಹಳ್ಳಿಯ ಜಯಶಾಂತ ಲಿಂಗೇಶ್ವರ ಸ್ವಾಮೀಜಿ, ಸಾಹಿತ್ಯ ಕ್ಷೇತ್ರದಲ್ಲಿ ಡಿ.ಎನ್.ಅಕ್ಕಿ, ಸಗರ ನಾಡಿನ ಸಾಂಸ್ಕೃತಿಕ ಕೊಡುಗೆಗಾಗಿ ಡಾ.ರಂಗರಾಜ ವನದುರ್ಗ ಹಾಗೂ ಚಿತ್ರಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಡಾ.ಬಸವರಾಜ ಕಲೆಗಾರ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.
‘ಈಚೆಗೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹುಣಸಗಿಯ ಬಿ.ಎನ್.ಪಾಟೀಲ ಸ್ಮಾರಕ ಪ್ರೌಢ ಶಾಲೆಗೆ ₹20 ಸಾವಿರ, ದ್ವಿತೀಯ ಸ್ಥಾನ ಗಳಿಸಿದ ಹೆಗ್ಗನದೊಡ್ಡಿಯ ಸರ್ಕಾರಿ ಪ್ರೌಢಶಾಲೆ ₹15 ಸಾವಿರ ಮತ್ತು ತೃತೀಯ ಸ್ಥಾನ ಗಳಿಸಿದ ಸರ್ಕಾರಿ ಪ್ರೌಢಶಾಲೆ ಕನ್ನಳ್ಳಿ ವಿದ್ಯಾರ್ಥಿಗಳಿಗೆ ₹10 ಸಾವಿರ ನಗದು ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ’ ಎಂದು ತಿಳಿಸಿದರು.
‘ ಭೀಮಶೇನರಾವ ಕುಲಕರ್ಣಿ ಅವರ ಸಂಪಾದನೆಯಲ್ಲಿ ಪ್ರಕಟವಾದ ‘ಸುಜ್ಞಾನ ಸಿರಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಸಂಜೆ ಪ್ರಾಣೇಶ ಗಂಗಾವತಿ, ಬಸವರಾಜ ಮಹಾಮನಿ, ನರಸಿಂಹ ಜೋಶಿ ತಂಡದಿಂದ ನಗೆ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.