ಕಾರಟಗಿ: ಸಮೀಪದ ನಾಗನಕಲ್ ಬಳಿಯ ರಾಜೀವ್ಗಾಂಧಿ ಕುಡಿಯುವ ನೀರಿನ ಕೆರೆಗೆ ತುಂಗಭದ್ರಾ ಎಡದಂಡೆ ಮುಖ್ಯನಾಲೆಯಿಂದ ನೀರು ಹರಿಸಲಾಗುತ್ತಿದೆ. ಆದರೆ ಬೃಹತ್ ಕೆರೆಗೆ ಒಂದು ಮೋಟಾರ್ನಿಂದ ನೀರು ಸಂಗ್ರಹಿಸಲಾಗುತ್ತಿರುವುದರಿಂದ ವಿಳಂಬವಾಗುತ್ತಿದೆ.
ಕೆರೆಯಲ್ಲಿ ನೀರು ಸಂಗ್ರಹಿಸಿರುವುದರಿಂದ ಬತ್ತುತ್ತಿರುವ ಕೊಳವೆಬಾವಿಗೆ ಮರುಜೀವ ದೊರೆಯುವ ಜೊತೆಗೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ಸರಬರಾಜು ಸುಗಮವಾಗಿ ಮಾಡಬಹುದು ಎಂಬ ನಿರೀಕ್ಷೆ ಇದೆ.
ಯೋಜನೆ ಹಸ್ತಾಂತರ ಅಧಿಕೃತವಾಗಿ ನಡೆಯದಿದ್ದರೂ, ಜನರಿಗೆ ತೊಂದರೆಯಾಗದಿರಲಿ ಎಂಬ ಸದಾಶಯದಿಂದ ಪಟ್ಟಣದ ಪುರಸಭೆ ಆಡಳಿತ ಮಂಡಳಿ ಆಸಕ್ತಿ ವಹಿಸಿ ನೀರು ಸಂಗ್ರಹ ಮಾಡುತ್ತಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ ತಿಳಿಸಿದರು.