ಸುರಪುರ: ‘ಬಡವರಿಗೆ ದಾನ, ಧರ್ಮ ಮಾಡುವುದನ್ನು ಕುರಾನ್ನಲ್ಲಿ ಉಲ್ಲೇಖಿಸಲಾಗಿದೆ. ದುಡಿದ ಸ್ವಲ್ಪ ಹಣವನ್ನು ದಾನ ಮಾಡುವುದರಿಂದ ಜನ್ಮ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಮದೀನಾ ವೆಲ್ಫೇರ್ ಸಮಿತಿ ಕಾರ್ಯ ಶ್ಲಾಘನೀಯ’ ಎಂದು ಮುಖ್ತಿ ಅಬ್ದುಲ್ ಖದೀರಸಾಬ ಹೇಳಿದರು.
ಹಸನಾಪುರದಲ್ಲಿ ಮಂಗಳವಾರ ಮದೀನಾ ವೆಲ್ಫೇರ್ ಸಮಿತಿ ವತಿಯಿಂದ ಬಡವರಿಗೆ ಬಟ್ಟೆ, ಪಡಿತರ ವಿತರಿಸಿ ಅವರು ಮಾತನಾಡಿದರು.
‘ಸಮಾಜಮುಖಿ ಸಮಿತಿಗಳಿಗೆ ಉಳ್ಳವರು ಪ್ರೋತ್ಸಾಹ ನೀಡಬೇಕು. ಕೈಲಾದಷ್ಟು ದೇಣಿಗೆ ನೀಡಿದರೆ ಅದು ಸದ್ವಿನಿಯೋಗವಾಗುತ್ತದೆ. ಇಂತಹ ಸಮಿತಿಗಳು ಹೆಚ್ಚಾದಷ್ಟು ಸಾಮಾಜಿಕ ಸ್ವಾಸ್ಥ್ಯ ಉಂಟಾಗುತ್ತದೆ’ ಎಂದರು.
ಅವಾದ ಬಿನ್ ಚಾವುಸ್, ಅಹ್ಮದ್ ಹುಸೇನ ಶಹಾಪುರಿ, ಹಣಮಂತ ಚಂದನಕೇರಿ, ಅಸ್ಲಂ ಮಾಸ್ಟರ್, ಅಬ್ದುಲ್ ಅಲೀಮ ಗೋಗಿ, ಗುಲಾಮ ರಸೂಲ ಕೆಂಭಾವಿ, ಅಬ್ದುಲ್ ಜಲೀಲ ಬಾಬಾ, ಕೆ.ಕೆ.ಫರೀದಿ, ಈರಯ್ಯ ಗುತ್ತೇದಾರ, ಮಹ್ಮದ್ ಉಸ್ಮಾನ, ಸಮಿತಿಯ ಉಪಾಧ್ಯಕ್ಷ ಮಹ್ಮದ್ ಹುಸೇನ್ ಸ್ಟಾರ್, ಕಾರ್ಯದರ್ಶಿ ಮಹ್ಮದ್ ಇಬ್ರಾಹಿಂ ಸ್ಟಾರ್ ಇದ್ದರು.
ಸಮಿತಿ ಅಧ್ಯಕ್ಷ ಮಹ್ಮದ್ ಹಸನ್ ಸ್ಟಾರ್ ಸ್ವಾಗತಿಸಿದರು. ಎಕ್ಬಾಲ ರಾಯಿ ನಿರೂಪಿಸಿದರು. ಸಲೀಮ ದೀವಳಗುಡ್ಡ ವಂದಿಸಿದರು.
ಒಟ್ಟು 130 ಜನರಿಗೆ ಅಕ್ಕಿ, ಎಣ್ಣೆ, ಬೇಳೆ, ಸಕ್ಕರೆ, ಮಸಾಲೆ, ಚಹಾಪುಡಿ ಯುಳ್ಳ ಒಂದು ಕಿಟ್ ಮತ್ತು ಸೀರೆ, ಕಂಬಳಿ, ಚಿಕ್ಕಮಕ್ಕಳಿಗೆ ಸಿದ್ದ ಉಡುಪು ಉಚಿತವಾಗಿ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.