ADVERTISEMENT

‘ಮುಖ್ಯನಾಲೆ ಬದಿಯಲ್ಲಿ ಸಸಿ ನೆಡಲು ಅಗತ್ಯ ಸಹಕಾರ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 6:23 IST
Last Updated 23 ಜುಲೈ 2017, 6:23 IST

ಚಿಂಚೋಳಿ: ‘ಕಲಬುರ್ಗಿ ನೀರಾವರಿ ವೃತ್ತದ ವ್ಯಾಪ್ತಿಗೆ ಬರುವ ಜಲಾಶಯಗಳ ಪ್ರಾಂಗಣದಲ್ಲಿ 1,500 ಎಕರೆ ಖಾಲಿ ಜಮೀನಿನಲ್ಲಿ ಮತ್ತು ವಿವಿಧ ನೀರಾವರಿ ಯೋಜನೆಗಳ ನಾಲೆಗಳ ಬದಿಯಲ್ಲಿ ಸಸಿ ನೆಡಲು ಅವಕಾಶವಿದೆ’ ಎಂದು ಮುಖ್ಯ ಎಂಜಿನಿಯರ್‌ ಜಗನ್ನಾಥ ಹಾಲಿಂಗೆ ತಿಳಿಸಿದರು.

ತಾಲ್ಲೂಕಿನ ನಾಗರಾಳ್‌ ಜಲಾಶಯದ ಬಳಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ, ಸಾಮಾಜಿಕ ಅರಣ್ಯ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಹಾಗೂ ಚಿಮ್ಮನಚೋಡ್‌ ಸರ್ಕಾರಿ ಪ್ರೌಢ ಶಾಲೆಯ ಆಶ್ರಯದಲ್ಲಿ ಶನಿವಾರ ನಡೆದ ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅವಕಾಶವಿದ್ದಲ್ಲಿ ಸಸಿ ನೆಟ್ಟು ಹಸಿರು ಬೆಳೆಸಲು ಎಲ್ಲರೂ ಮುಂದಾಗಬೇಕು. ಕೆಳದಂಡೆ ಮುಲ್ಲಾಮಾರಿ ಯೋಜನೆಯ 80 ಕಿ.ಮೀ ಮುಖ್ಯ ನಾಲೆ ಬದಿ ಹಾಗೂ ಯೋಜನೆಯ ಮುಳುಗಡೆಯಾದ ಗ್ರಾಮಗಳ ಪುನರ್‌ ವಸತಿ ಕೇಂದ್ರಗಳಲ್ಲಿ ಸಸಿ ನೆಡಲು ಇಲಾಖೆ ಸಹಕಾರ ನೀಡಲಿದೆ’ ಎಂದರು.

ADVERTISEMENT

‘ನಾಗರಾಳ ಜಲಾಶಯದ ಬಳಿ 2,000 ಸಸಿ ನೆಡಲು ರೆಡ್‌ ಕ್ರಾಸ್‌ ಸಂಸ್ಥೆ ಉದ್ದೇಶಿಸಿದೆ’ ಎಂದು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ರಾಜ್ಯ ಘಟಕದ ಉಪಾಧ್ಯಕ್ಷ ಅಪ್ಪಾರಾವ್‌ ಅಕ್ಕೋಣಿ ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣ ಯಾದವ್‌ ಮಾತನಾಡಿ, ‘ಜಿಲ್ಲೆಯಲ್ಲಿ ಶೇ 7ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಶೇ 33ಕ್ಕೆ ವಿಸ್ತರಿಸಬೇಕು. ರೈತರು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಸಿ ನೆಟ್ಟು 3 ವರ್ಷ ಕಾಪಾಡಿದರೆ ಒಂದು ಸಸಿಗೆ ₹100 ಮೂರು ವರ್ಷದಲ್ಲಿ ಪಾವತಿಸಲಾಗುವುದು’ ಎಂದರು.

‘ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡರೆ ನಿಮಗೆ ನೈಮರ್ಲ್ಯದ ಸಮಸ್ಯೆ ಬಾಧಿಸುವುದಿಲ್ಲ’ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಅನಿಲ ರಾಠೋಡ್‌ ತಿಳಿಸಿದರು.

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಸಭಾಪತಿ ಜಗನ್ನಾಥ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಮುಖ್ಯಶಿಕ್ಷಕ ರಾಘವೇಂದ್ರ ಕುಲಕರ್ಣಿ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಬಾದಿ, ಗುಣನಿಯಂತ್ರಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಎನ್‌.ವಿ ಮುರುಳಿಧರ, ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಾ ಅಗ್ನಿಹೋತ್ರಿ, ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚವ್ಹಾಣ, ಸಾಮಾಜಿಕ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಶಿಕ್ಷಕ ವಿಜಯಭರತ ಬಸಂತಪುರ, ರಾಘವೇಂದ್ರರೆಡ್ಡಿ ಗುಡೆಪನೋರ್‌, ಉದ್ಯಮಿ ಶಿವಣ್ಣ ಸಿಂಧಗಿ ಇದ್ದರು.

ನಾಗೇಶ ಭದ್ರಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರೇವಣಸಿದ್ದಯ್ಯ ನರನಾಳ್‌ ಸ್ವಾಗತಿಸಿದರು. ನಂದಕುಮಾರ ನಾಯನೂರು ನಿರೂಪಿಸಿದರು. ಶ್ರೀಶೈಲ್‌ ನಾಗಾವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.