ಶಹಾಪುರ: ರೈತರಿಗೆ ಕಡಿಮೆ ಬೆಲೆಗೆ ವಿತರಿಸುವ ಜಿಪ್ಸ್ಂ ಗೊಬ್ಬರ ತಾಲ್ಲೂಕಿನ ಹಯ್ಯಾಳ ರೈತ ಸಂಪರ್ಕ ಕೇಂದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ‘ಕರ್ತವ್ಯ ಲೋಪ ಎಸಗಿದ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು’ ಎಂದು ದಲಿತಸೇನೆಯ ಸಂಚಾಲಕ ಶರಣುರಡ್ಡಿ ಹತ್ತಿಗೂಡೂರ ಆಗ್ರಹಿಸಿದ್ದಾರೆ.
‘ರೈತರ ಅನುಕೂಲಕ್ಕಾಗಿ ಸರ್ಕಾರ ಕಡಿಮೆ ದರದಲ್ಲಿ ಜಿಪ್ಸ್ಂ ಗೊಬ್ಬರವನ್ನು ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಸಾಗಣೆ ಮಾಡಿದೆ. ಕರ್ಲ ಭೂಮಿ ಇರುವ ಜಮೀನುಗಳಲ್ಲಿ ನೇಗಿಲು ಒಡೆದು ಅದರ ಮಧ್ಯದಲ್ಲಿ ಹೆಚ್ಚಿನ ಶಕ್ತಿಯುತವಾದ ಜಿಪ್ಸ್ಂ ಗೊಬ್ಬರವನ್ನು ರೈತರು ಹಾಕುತ್ತಾರೆ’ ಎಂದು ತಿಳಿಸಿದರು.
‘ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಪೂರೈಕೆ ಮಾಡದೆ ನಿಷ್ಕಾಜಿ ತೋರಿಸಿದ್ದಾರೆ. ಮಳೆಗೆ ಗೊಬ್ಬರ ಹಾಳಾಗಿದೆ. ಸಾರ್ವಜನಿಕರ ಆಸ್ತಿಯನ್ನು ನಷ್ಟ ಉಂಟು ಮಾಡಿದ ಅಧಿಕಾರಿಯ ಸಂಬಳವನ್ನು ತಡೆ ಹಿಡಿಯಬೇಕು. ಕರ್ತವ್ಯದಲ್ಲಿ ನಿಷ್ಕಾಳಜಿ ತೋರಿದ್ದಕ್ಕಾಗಿ ಅಮಾನತುಗೊಳಿಸಬೇಕು’ ಎಂದು ಕೃಷಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
‘ಜಿಪ್ಸ್ಂ ಗೊಬ್ಬರ ಚೀಲ ಹರಿದು ಹೋಗಿವೆ. ಬೇರೆ ಚೀಲದಲ್ಲಿ ತುಂಬಿ ಸುರಕ್ಷಿತವಾಗಿ ಇಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಡಾ.ದಾನಪ್ಪ ಕತ್ನಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.