ADVERTISEMENT

15 ಲಕ್ಷ ಜನರಿಗೆ ಭೂಮಿ ನೀಡುವ ಗುರಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 7:02 IST
Last Updated 14 ಜುಲೈ 2017, 7:02 IST

ಸುರಪುರ: ‘ಮುಖ್ಯಮಂತ್ರಿ ಸಿದ್ದ ರಾಮಯ್ಯ ಎಲ್ಲಾ ಜಾತಿ ಜನಾಂಗದ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ’ ಎಂದು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎನ್. ಗಿರಿಮಲ್ಲಪ್ಪ ಹೇಳಿದರು. ನಗರದ ಟೇಲರ್ ಮಂಜಿಲ್‌ನಲ್ಲಿ ಮಹರ್ಷಿ ವಾಲ್ಮೀಕಿ ಸಂಘದಿಂದ ಗುರುವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಪಂಗಡದ ಅಭಿವೃದ್ಧಿಯೇ ನಿಗಮದ ಗುರಿ. ಈ ನಿಟ್ಟಿನಲ್ಲಿ ನಿಗಮ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ನಿಗಮದ ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಯೋಜನೆ ಗಳ ಲಾಭವನ್ನು ನೇರವಾಗಿ ಬಡವರಿಗೆ ತಲುಪಿಸಬೇಕು ಎಂಬುದೇ ನನ್ನ ಗುರಿ’ ಎಂದರು.

‘2016-–17ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಜಿಲ್ಲೆಗೆ 95 ಫಲಾನುಭವಿಗಳ ಆಯ್ಕೆ ಗುರಿ ಹೊಂದಿದ್ದು,  ಈ ಪೈಕಿ 45 ಫಲಾನುಭವಿ ಗಳನ್ನು ಆಯ್ಕೆ ಮಾಡಲಾಗಿದೆ. ಉದ್ಯಮ ಶೀಲತಾ ಯೋಜನೆಯಡಿಯಲ್ಲಿ 37 ಫಲಾನುಭವಿಗಳಿಗೆ ಭೂಮಿ ನೀಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ರಾಜ್ಯದಲ್ಲಿ 15 ಲಕ್ಷ ಜಮೀನು ರಹಿತ ಬಡವರಿಗೆ ಭೂಮಿ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. 25 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಭೂಮಿ ವಿತರಣೆಯಲ್ಲಿ ಪಾರದರ್ಶಕ ಅಳವಡಿಸಿಕೊಳ್ಳುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ’ ಸೂಚಿಸಿರುವುದಾಗಿ ತಿಳಿಸಿದರು.

‘ಉದ್ಯಮಶೀಲತಾ ಯೋಜನೆಯಡಿ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಕೊಳ್ಳಲು ನೇರ ಸಾಲ ನೀಡುವಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ. ಸಮಾಜದ ಯುವಕರು ಯೋಜನೆಗಳ ಸದುಪಯೋಗ ಪಡೆದು ಅರ್ಥಿಕವಾಗಿ ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

‘ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆ ಯಡಿಯಲ್ಲಿ ಮಂಜೂರಾದ ಕೊಳವೆ ಬಾವಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿ ಸುತ್ತೇನೆ’ ಎಂದರು.

‘ನಿಗಮ ನೀಡುವ ಸೌಲಭ್ಯಗಳಲ್ಲಿ ದುರುಪಯೋಗವಾಗಿದ್ದರೆ ಶಿಸ್ತು ಕ್ರಮ ಜರುಗಿಸುತ್ತೇನೆ. ಕೆಲವರು ಪರಿಶಿಷ್ಟ ಪಂಗಡದ ಖೊಟ್ಟಿ ದಾಖಲಾತಿ ಸಲ್ಲಿಸಿ ಯೋಜನೆ ದುರುಪಯೋಗ ಮಾಡಿ ಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೂಡಾ ಸೂಕ್ತ ತನಿಖೆ ಮಾಡಿಸಲಾಗುವುದು’ ಎಂದು ತಿಳಿಸಿದರು.

ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ ಮಾತನಾಡಿ, ‘ಯೋಜನೆ ಅನುಷ್ಠಾನದಲ್ಲಿ ರಾಜಕೀಯ ಬೆರೆಸಬೇಡಿ. ಸಮಾಜದ ಬಡವರನ್ನು ಗುರುತಿಸಿ, ಪಕ್ಷಾತೀತವಾಗಿ ಯೋಜನೆ ಗಳನ್ನು ತಲುಪಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗಂಗಾಧರ ನಾಯಕ ತಿಂಥಣಿ, ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ, ಪ್ರಧಾನ ಕಾರ್ಯದರ್ಶಿ ವೆಂಕಟೇಶನಾಯಕ ಬೇಟೆಗಾರ, ಮುಖಂಡರಾದ ಗೌಡಪ್ಪಗೌಡ ಡೊಣ್ಣಿ ಗೇರಾ, ಬಲಭೀಮನಾಯಕ ದೇವಾ ಪುರ, ಹಣಮಂತ ವೆಂಕಟಾಪುರ, ನಿಗಮದ ಜಿಲ್ಲಾ ವ್ಯವಸ್ಥಾಪಕ ಬಸವ ರಾಜ ಜ್ಯೋತಿ, ತಾಲ್ಲೂಕು ಅಭಿವೃದ್ಧಿ ಅಧಿಕಾರಿ ನರಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.