ADVERTISEMENT

ಸಂಭ್ರಮದ ಗವಿ ಸಿದ್ದಲಿಂಗೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 7:27 IST
Last Updated 2 ಫೆಬ್ರುವರಿ 2018, 7:27 IST

ಗುರುಮಠಕಲ್: ಸಮೀಪದ ಚಿಂತನಹಳ್ಳಿಯ ಗವಿಸಿದ್ದಲಿಂಗೇಶ್ವರ ದೇವಸ್ಥಾನದ ಜಾತ್ರೆ ಹಾಗೂ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.
ಖಗ್ರಾಸ ಚಂದ್ರಗ್ರಹಣದ ಕಾರಣ ಕೊಂಚ ತಡವಾಗಿ ರಥೋತ್ಸವ ಜರುಗಿತು.

‘ದಟ್ಟ ಕಾನನದ ನಡುವೆ ನೆಲೆಸಿದ್ದ ಮಹಾತ್ಮ ಗವಿಸಿದ್ದಲಿಂಗೇಶ್ವರ ಮಹಾನ್‌ ಪವಾಡ ಪುರುಷ, ಮೈದುಂಬಿ ಹರಿಯುವ ಜಲಪಾತಡ ನಡುವೆ ಗುಹೆಯಲ್ಲಿ ಐಕ್ಯನಾದ ಸಿದ್ದೇಶ್ವರ ಭಕ್ತರಿಗೆ ಸದಾ ರಕ್ಷಕನಾಗಿ ಅವರ ಆರಾಧ್ಯ ದೈವನಾಗಿದ್ದಾನೆ. ಅವರ ಜೀವ ಚರಿತ್ರೆಯನ್ನು ಮತ್ತು ಸುಕ್ಷೆತ್ರದ ಸುಂದರ ಸೊಬಗನ್ನು ಮನದಾಳಕ್ಕೆ ತಲುಪುವಂತೆ ಮಧುರ ಗೀತೆಗಳಲ್ಲಿ ಸೆರೆಹಿಡಿದುರುವುದು ಸಂತೋಷವಾಗಿದೆ’ ಎಂದು ಸೇಡಂನ ಹಾಲಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಹೇಳಿದರು.

ಅವರು ಸುಮಧುರ ಮೆಲೋಡಿಸ್ ರವರು ರೂಪಿಸಿರುವ ಗವಿ ಸಿದ್ದಲಿಂಗೇಶ್ವರ ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಲ್ಹೇರಿ ವಾರಣಾಸಿ ಹಿರೇಮಠ ಹಾಗೂ ಭಂಗೀಮಠ ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯ ಸ್ವಾಮೀಜಿ,  ಜಾಕನಪಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ, ಭಕ್ತಿಗೀತೆಗಳ ಸಾಹಿತ್ಯ ರಚನಾಕಾರ ಮಹೇಶ ಚಿಂತನಹಳ್ಳಿ, ದಾಸೋಹ ದಾನಿ ಬಸವರಾಜಪ್ಪ ಕೊಟ್ಟೂರು, ಪ್ರಾಂಶುಪಾಲ ಸುಭಾಷಚಂದ್ರ ಕಾವಲಿ, ಜಗನ್ನಾಥ ವೇದಿಕೆಯಲ್ಲಿದ್ದರು.

ADVERTISEMENT

ಚಿಂತನಹಳ್ಳಿ ಗ್ರಾಮದಿಂದ ಸುಮಾರು ಮೂರು ಕಿಲೋ ಮೀಟರ್ ದೂರದ ಕಾಡಿನಲ್ಲಿರುವ ಸುಂದರ ತಾಣದ ವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಗ್ರಾಮದ ಮುಖ್ಯ ಬೀದಿಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಕ್ಕಮಗಳೂರಿನ ಮಹಿಳಾ ವೀರಗಾಸೆಯರ ನೃತ್ಯ ಆಕರ್ಷಕವಾಗಿತ್ತು.  ಮೆರವಣಿಗೆಯುದ್ದಕ್ಕೂ ಡೊಳ್ಳುಕುಣಿತ, ಭಜನೆ, ಪುರವಂತಿಕೆ ಸೇವೆ ಗಮನಸೆಳೆಯಿತು. ಗ್ರಹಣದ ನಂತರ ಭಕ್ತರು ಗವಿ ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿ ಪ್ರಾಸಾದ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.