ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ನಟ ಗಣೇಶ್ ನಿವಾಸದಲ್ಲಿ ಬುಧವಾರ ಸಂಜೆ ನಟಿ ಅಮೂಲ್ಯ ಮತ್ತು ಜಗದೀಶ್ ಆರ್ ಚಂದ್ರ ಅವರ ಮದುವೆಯ ಮೆಹೆಂದಿ ಕಾರ್ಯಕ್ರಮ ಜರುಗಿತು.
ಗುಲಾಬಿ ಬಣ್ಣದ ಘಾಗ್ರಾ ಧರಿಸಿದ್ದ ಅಮೂಲ್ಯ ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ, ದುನಿಯಾ ವಿಜಯ್, ಸುಧಾರಾಣಿ, ಮಾಳವಿಕಾ ಅವಿನಾಶ್, ವಿಜಯ ರಾಘವೇಂದ್ರ ದಂಪತಿ, ಶರಣ್, ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರರಂಗದ ಅನೇಕರು ಈ ಸಂಭ್ರಮದಲ್ಲಿ ಭಾಗಿಯಾದರು.
ಮನೋಜ್ ಕುಮಾರ್ ಮತ್ತು ಸಿಂಪಲ್ ಅವರು ಅಮೂಲ್ಯ ಹಸ್ತದ ಮೇಲೆ ಮೆಹೆಂದಿಯ ಕುಸುರಿ ಬಿಡಿಸಿದರು. ಹಸಿ ಮೆಹೆಂದಿ ಆರುತ್ತಾ ಕೈಗಳ ಮೇಲೆ ಕೆಂಪು ಮೂಡಿದಂತೆ ಕೆನೆಬಣ್ಣದ ಅಮೂಲ್ಯ ಅವರ ಕೆನ್ನೆಗಳೂ ನಾಚಿಕೆ ಮತ್ತು ಸಂಭ್ರಮದಿಂದ ರಂಗೇರಿದ್ದವು.
ಸ್ವತಃ ಗಣೇಶ್ ಪತ್ನಿ ಶಿಲ್ಪಾ ಮತ್ತು ಮಗಳು ಚಾರಿತ್ರ್ಯ ಜತೆಗೆ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಪಂಜಾಬ್ ಶೈಲಿಯ ಬಾಂಗ್ರಾ ನೃತ್ಯದ ತಾಳಕ್ಕೆ ಅಮೂಲ್ಯ–ಜಗದೀಶ್ ಜತೆಗೆ ಎಲ್ಲರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಇದೇ 12ರಂದು ಆದಿಚುಂಚನಗಿರಿಯ ಬಿಜಿಎಸ್ ಸಭಾಭವನದಲ್ಲಿ ಅಮೂಲ್ಯ ಮತ್ತು ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.
11ರಂದು ಚಪ್ಪರಶಾಸ್ತ್ರ ಮತ್ತು 12ರಂದು ನಡೆಯುವ ಧಾರಾ ಮುಹೂರ್ತವು ಒಕ್ಕಲಿಗ ಸಂಪ್ರದಾಯದಂತೆ ಏರ್ಪಾಡಾಗಿದೆ. ಗುರುವಾರ ಮಧ್ಯಾಹ್ನದಿಂದಲೇ ಆದಿಚುಂಚನಗಿರಿ ಬಿಜಿಎಸ್ ಸಭಾಭವನದಲ್ಲಿ ಮದುವೆಗೆ ಸಂಬಂಧಿತ ಶಾಸ್ತ್ರಗಳು ನಡೆಯುತ್ತವೆ. ಮಾಂಗಲ್ಯ ಧಾರಣೆಯು ಕಾಲಭೈರವೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.