ADVERTISEMENT

ನಿರ್ದೇಶಕರ ಕಣ್ಣಾಮುಚ್ಚಾಲೆಯ 13 ಡೇಸ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

ಸಿನಿಮಾದ ಅರ್ಧ ಭಾಗದ ಚಿತ್ರೀಕರಣ ಮುಗಿದ ಬಳಿಕ, ಅನಿವಾರ್ಯತೆಯಿಂದ ನಿರ್ದೇಶಕನೇ ಅದನ್ನು ಕೈಬಿಟ್ಟ ಕಥೆಯಿದು! ಈಗ ಅದರ

ಚುಕ್ಕಾಣಿ ಹಿಡಿಯಲು ಮತ್ತೊಬ್ಬ ನಿರ್ದೇಶಕ ಬಂದಿದ್ದಾನೆ. ‘ಪಾಲಿಗೆ ಬಂದಿದ್ದು ಪಂಚಾಮೃತ’ ಎಂಬ ಭಾವನೆಯೊಂದಿಗೆ ಅದನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ.

ಇದು ‘13 ಡೇಸ್’ ಎಂಬ ಸಿನಿಮಾದ ಕಥೆ. ಕಾಳೇಗೌಡ ಎಂಬುವವರು ಹಣ ಹಾಕಿ, ಸಿನಿಮಾ ನಿರ್ಮಿಸಲು ಮುಂದಾದರು. ಉಮೇಶ್ ನಿರ್ದೇಶನದ ಹೊಣೆ ಹೊತ್ತರು. 35 ದಿನಗಳ ಕಾಲ ಚಿತ್ರೀಕರಣ ನಡೆಯಿತು. ಅಷ್ಟರಲ್ಲಿ ಉಮೇಶ್ ಅವರಿಗೆ ಯಾವುದೋ ಕೌಟುಂಬಿಕ ಸಮಸ್ಯೆಗಳು ಸರಮಾಲೆಯಾಗಿ ಎದುರು ನಿಂತವು. ಚಿತ್ರೀಕರಣ ವಿಳಂಬವಾಗುತ್ತಲೇ ಹೋಯಿತು. ಕೊನೆಗೆ ಅವರೇ ತಮ್ಮನ್ನು ನಿರ್ದೇಶನದ ಕೆಲಸದಿಂದ ಬಿಡುಗಡೆಗೊಳಿಸಲು ನಿರ್ಮಾಪಕರಿಗೆ ಮನವಿ ಮಾಡಿದರಂತೆ.

‘ಆರು ತಿಂಗಳ ಹಿಂದೆ ಚಿತ್ರೀಕರಣ ಶುರುವಾಗಿತ್ತು. ಸಿನಿಮಾದ ಶೇ 70ರಷ್ಟು ಭಾಗ ಮುಕ್ತಾಯವಾಗಿದೆ. ಆದರೆ ಉಮೇಶ್ ಮನವಿ ಮೇರೆಗೆ ಬೇರೊಬ್ಬ ನಿರ್ದೇಶಕರನ್ನು ಕರೆತಂದಿದ್ದೇವೆ’ ಎಂದು ಕಾಳೇಗೌಡರು ಕಿರಣ್‌ಕುಮಾರ್‌ ಅವರನ್ನು ಪರಿಚಯಿಸಿದರು.
ಮೈಸೂರು ಮೂಲದ ಕಿರಣ್‌ಕುಮಾರ್ ಬಣ್ಣದಲೋಕ ಅರಸಿಕೊಂಡು ಬೆಂಗಳೂರಿಗೆ ಬಂದವರು. ಕೆಲವು ಸಿನಿಮಾಗಳಿಗೆ ಸಹಾಯಕರಾಗಿ ದುಡಿದಿದ್ದಾರೆ.

ಸ್ವತಂತ್ರ ನಿರ್ದೇಶಕನಾಗಿ ಗುರುತಿಸಿಕೊಳ್ಳುವ ಸಂತಸ ಅವರದು. ‘ಅವಕಾಶ ನನ್ನನ್ನು ಹುಡುಕಿಕೊಂಡು ಬಂದಿದೆ. ಅರ್ಧಕ್ಕಿಂತ ಹೆಚ್ಚು ಚಿತ್ರೀಕರಣ ಪೂರ್ಣಗೊಂಡಿದೆ. ಅದಕ್ಕೆ ಹೊಂದಿಕೆಯಾಗುವಂತೆ ಉಳಿದ ಭಾಗ ಮುಗಿಸುವುದು ನನ್ನ ಗುರಿ. ಅಗತ್ಯ ಬಿದ್ದರೆ ಚಿತ್ರೀಕರಿಸಿದ ಭಾಗವನ್ನು ಪುನರ್‌ಚಿತ್ರೀಕರಿಸಲಿದ್ದೇನೆ’ ಎನ್ನುತ್ತಾರೆ ಕಿರಣ್‌ಕುಮಾರ್‌.

ನಿರ್ದೇಶಕ ಉಮೇಶ್ ಜತೆ ಸಹಾಯಕನಾಗಿ ಕೆಲಸ ಮಾಡಿದ ದೀಪು, ಈ ಸಿನಿಮಾದೊಂದಿಗೆ ನಾಯಕನಾಗಿ ಬಣ್ಣ ಹಚ್ಚಿಕೊಳ್ಳಲಿದ್ದಾರೆ.

ADVERTISEMENT

‘ಇದೊಂದು ನಿಗೂಢ ಕಥೆಯ ಚಿತ್ರ. ಪ್ರೇಕ್ಷಕ ಕುತೂಹಲದಿಂದ ಇಡೀ ಸಿನಿಮಾ ನೋಡುವಂಥ ಕಥೆ ಇದರಲ್ಲಿದೆ’ ಎಂದರು. ಖಾಸಗಿ ಟಿವಿ ಚಾನೆಲ್‌ನಲ್ಲಿ ಸುದ್ದಿವಾಚಕಿಯಾಗಿ ಅನುಭವ ಪಡೆದಿರುವ ಚೈತ್ರಾಗೆ ‘13 ಡೇಸ್‌’ನಲ್ಲಿ ಹಳ್ಳಿ ಹುಡುಗಿ ಪಾತ್ರವಿದೆ. ಚಿತ್ರದ ಬಜೆಟ್‌ ಎಷ್ಟೆಂಬುದನ್ನು ನಿರ್ಮಾಪಕರು ಹೇಳಲಿಲ್ಲ; ಆದರೆ ಈವರೆಗೆ ಸುಮಾರು 80 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂಬುದನ್ನು ಬಹಿರಂಗಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.