‘ನಾಗಿಣಿ’ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ. ನಾಗಲೋಕದ ಹಾವೊಂದು ತನ್ನ ತಂದೆ, ತಾಯಿಯನ್ನು ಬಲಿ ತೆಗೆದುಕೊಂಡ ದುಷ್ಟರನ್ನು ಸಂಹಾರ ಮಾಡಿ ನಾಗಮಣಿ ತೆಗೆದುಕೊಂಡು ಹೋಗುವುದಕ್ಕೆ ದ್ವೇಷ ಹೊತ್ತು ಭೂಲೋಕಕ್ಕೆ ಬರುವುದೇ ಈ ಧಾರಾವಾಹಿಯ ಕಥಾಹಂದರ.
ಎರಡು ವರ್ಷಗಳಿಂದ ಮೂಡಿಬರುತ್ತಿರುವ ಈ ಧಾರಾವಾಹಿಯ ನಿರ್ದೇಶಕ ಹಯವದನ. ಧಾರಾವಾಹಿಯು 500 ಸಂಚಿಕೆ ಪೂರ್ಣಗೊಳಿಸಿದ್ದು, ಇದರ ಸಂಭ್ರಮಾಚರಣೆಯು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತು.
ಮಂತ್ರವಾದಿ ಭೈರವ, ಅರ್ಜುನ್, ಮಯೂರಿ, ಅಮೃತಾ ಪ್ರದರ್ಶಿಸಿದ ನೃತ್ಯ ನೆರೆದಿದ್ದ ಪ್ರೇಕ್ಷಕರ ಮನಸೆಳೆಯಿತು. ಅದರಲ್ಲೂ ದ್ವಿಪಾತ್ರಗಳಾದ ಶೇಷಾ ಹಾಗೂ ಅಮೃತಾ ಪಾತ್ರಗಳು ಒಟ್ಟಿಗೆ ವೇದಿಕೆ ಮೇಲೆ ನೃತ್ಯ ಮಾಡಿದ್ದು ಇಡೀ ಕಾರ್ಯಕ್ರಮದ ವಿಶೇಷವಾಗಿತ್ತು. ಕಥೆಯ ಬಗ್ಗೆ ಪ್ರೇಕ್ಷಕರ ಜೊತೆಗೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿತು.
ನಾಗಿಣಿಯ ಯಶಸ್ಸಿನ ಕಾರ್ಯಕ್ರಮದಲ್ಲಿ ಧಾರಾವಾಹಿಯ ಕಲಾವಿದರ ಜೊತೆಗೆ ಡಾನ್ಸ್ ಕರ್ನಾಟಕ ಡಾನ್ಸ್, ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು ಹಾಗೂ ಸರಿಗಮಪ ಕಲಾವಿದರು ಹಾಡು, ಕುಣಿತದಲ್ಲಿ ಭಾಗಿಯಾಗಿ ರಂಜಿಸಿದರು.
ಕಾಮಿಡಿ ಕಿಲಾಡಿಯ ನಯನಾ ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ನ ಲೋಕಿ ಕಾರ್ಯಕ್ರಮ ನಿರೂಪಿಸಿದರು. ಇದೇ ಭಾನುವಾರ ಸಂಜೆ 4.30ಕ್ಕೆ ನಾಗಿಣಿಯ ಸಂಭ್ರಮ ಕಾರ್ಯಕ್ರಮ ಪ್ರಸಾರವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.